ADVERTISEMENT

ರಂಗನತಿಟ್ಟು: ವಿದ್ಯುತ್ ಯೋಜನೆಗೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಶ್ರೀರಂಗಪಟ್ಟಣ: ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮ ಹಾಗೂ ಮಹದೇವಪುರ ಬಳಿ, ಕಾವೇರಿ ನದಿ ಪಾತ್ರದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಆರಂಭಿಸಲು ಖಾಸಗಿ ಸಂಸ್ಥೆಗಳು ರಾಜ್ಯ ವನ್ಯಜೀವಿ ಮಂಡಳಿ ಅನುಮತಿಗೆ ಕೋರಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕ್ರಿಕೆಟಿಗ, ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್‌ಕುಂಬ್ಳೆ, ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳ ಪರಿಶೀಲಿಸಿದರು.

ತಾಲ್ಲೂಕಿನ ಮಹದೇವಪುರ ಬಳಿ ಮೈತ್ರಿ ಜಲ ವಿದ್ಯುತ್ ಉತ್ಪಾದನಾ ಸಂಸ್ಥೆ ಹಾಗೂ ರಂಗನತಿಟ್ಟು ಬಳಿಯ ಬಂಗಾರದೊಡ್ಡಿ ನಾಲೆ ಒಡ್ಡು ಇರುವಲ್ಲಿ ನಿಮಿಷಾಂಬ ಜಲ ವಿದ್ಯುತ್ ಉತ್ಪಾದನಾ ಸಂಸ್ಥೆ ವಿದ್ಯುತ್ ಉತ್ಪಾದನೆ ಆರಂಭಿಸಲು ಉದ್ದೇಶಿಸಿದ್ದು, ಅನುಮತಿಗೆ ಅರ್ಜಿ ಸಲ್ಲಿಸಿವೆ.
 
ಮೈತ್ರಿ ಸಂಸ್ಥೆ ರೂ.30 ಕೋಟಿ ವೆಚ್ಚದಲ್ಲಿ, 6 ಮೆಗಾವಾಟ್ ಹಾಗೂ ನಿಮಿಷಾಂಬ ಸಂಸ್ಥೆ ರೂ.18 ಕೋಟಿ ವೆಚ್ಚದಲ್ಲಿ 3 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾನಾ ಘಟಕ ಆರಂಭಿಸುವ ಇಚ್ಛೆ ವ್ಯಕ್ತಪಡಿಸಿವೆ.

ಪರಿಶೀಲನೆ ನಂತರ ಪಕ್ಷಿಧಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅನಿಲ್‌ಕುಂಬ್ಳೆ, `ಘಟಕ ಆರಂಭಿಸಲು ಉದ್ದೇಶಿಸಿರುವ ಸ್ಥಳ ನೋಡಿದ್ದೇವೆ. ಸ್ಯಾಟಲೈಟ್ ಮೂಲಕ ಯೋಜನೆ ಸಾಧಕ- ಬಾಧಕ ಪರಿಶೀಲನೆ ನಡೆಯಲಿದೆ. ನಂತರ ಈ ಯೋಜನೆಗಳಿಗೆ ಅನುಮತಿ ನೀಡಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.