ಕುಶಾಲನಗರ: ಉತ್ತರ ಕೊಡಗಿನ ಬಯಲು ಸೀಮೆಯ ಶಿರಂಗಾಲದಲ್ಲಿ ಶನಿವಾರ ಮಂಟಿಗಮ್ಮದೇವಿ ಜಾತ್ರೆಯ ಅಂಗವಾಗಿ ಏರ್ಪಡಿಸಲಾಗಿದ್ದ ಜಾನಪದ ಕ್ರೀಡೆಯಾದ ಎತ್ತಿನ ಗಾಡಿ ಓಟದ ಸ್ಪರ್ಧೆಯು ಜನರನ್ನು ರಂಜಿಸಿತು.
ಗ್ರಾಮ ದೇವಾಲಯ ಸಮಿತಿ, ಕ್ರೀಡಾ ಸಮಿತಿ ಆಶ್ರಯದಲ್ಲಿ ನಡೆದ ವೇಗದ ಎತ್ತಿನ ಗಾಡಿ ಓಟವು ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಮೈನವಿರೇಳಿಸಿತು. ಸ್ಪರ್ಧೆಯಲ್ಲಿ ರೈತರು ಅತ್ಯಂತ ಹುರುಪಿನಿಂದ ಪಾಲ್ಗೊಂಡಿದ್ದರು. ಪ್ರತಿ ಎರಡು ವರ್ಷಕ್ಕೊಮ್ಮೆ ಬತ್ತದ ಒಕ್ಕಲುತನ ಮುಗಿದ ಬಳಿಕ ಯುಗಾದಿ ಹಬ್ಬಕ್ಕೆ ಮುನ್ನ ನಡೆಯುವ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಸಂತೆಮಾಳ ರಸ್ತೆಯಲ್ಲಿ ನಡೆದ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಎತ್ತಿನ ಗಾಡಿಗಳು ಪಾಲ್ಗೊಂಡಿದ್ದವು. ಗಾಡಿಯನ್ನು ವೇಗದಿಂದ ಎಳೆದುಕೊಂಡು ಗುರಿ ಮುಟ್ಟಲು ಮುನ್ನುಗ್ಗುತ್ತಿದ್ದ ಎತ್ತುಗಳಿಗೆ ಪ್ರೇಕ್ಷಕರು ಕೇಕೆ ಹಾಕಿ ಅವುಗಳನ್ನು ಹುರಿದುಂಬಿಸುತ್ತಿದ್ದುದು ಕಂಡು ಬಂತು. ಈ ಓಟವು ನೆರೆದಿದ್ದವರಲ್ಲಿ ರೋಮಾಂಚನಕಾರಿ ಅನುಭವ ನೀಡಿತು.
ಗಾಡಿ ಓಟದ ಸ್ಪರ್ಧೆಗೆ ಗ್ರಾ.ಪಂ. ಅಧ್ಯಕ್ಷ ಎಸ್.ಬಿ. ಶ್ರೀಕಾಂತ್ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಎಸ್.ಎನ್. ಜಯಪ್ರಕಾಶ್, ಕಾರ್ಯದರ್ಶಿ ಎಸ್.ವಿ. ಶಿವಾನಂದ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ವಿ. ನಂಜುಂಡಪ್ಪ, ಎಸ್.ವಿ. ಧನೇಂದ್ರಕುಮಾರ್, ರಾಜು, ಎಸ್.ಟಿ. ಅಶ್ವತ್ಕುಮಾರ್, ಎಸ್.ಎಸ್. ಚಂದ್ರಶೇಖರ್, ಎಸ್.ಎಚ್.ಗಣೇಶ್, ಎಂ.ಎಸ್.ಗಣೇಶ್, ಇತರರು ಇದ್ದರು.
ಸ್ಪರ್ಧೆಯಲ್ಲಿ ವೇಗದ ಗಾಡಿ ಓಟಕ್ಕೆ 400 ಮೀ. ದೂರ ನಿಗದಿಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.