ADVERTISEMENT

ರಕ್ಷಣೆ ಕೊರಿ ಎಸ್ಪಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಮಂಡ್ಯ: ಜಿಲ್ಲೆಯ ಆಬಲವಾಡಿಯಲ್ಲಿ ಮರ್ಯಾದೆ ಹತ್ಯೆ ಘಟನೆಯಲ್ಲಿ ಮೃತಪಟ್ಟ ಸುವರ್ಣಾ ಅವರ ಪ್ರಿಯಕರ ಎನ್ನಲಾದ ಗೋವಿಂದರಾಜು ಅವರ ಪೋಷಕರು ಮತ್ತು ಸಹೋದರರು ಮಂಗಳವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಹಾಜರಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.

~ಘಟನೆಯ ನಂತರ ನಮಗೆ ಪ್ರಾಣಭೀತಿ ಎದುರಾಗಿದೆ. ಘಟನೆ ಕಂಡು ನಾವು ಆತಂಕಗೊಂಡಿದ್ದೇವೆ. ಹುಡುಗಿಯ ಮನೆಯವರಿಂದ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕು~ ಎಂದು ಕೋರಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರು ಹೇಳಿಕೆ ಪಡೆದರು. ಮಧ್ಯಾಹ್ನ 12 ಗಂಟೆ ವೇಳೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಹಾಜರಾಗಿ ಮನವಿ ಸಲ್ಲಿಸಿದರು.

ಮೃತ ಯುವತಿಯ ಪ್ರಿಯಕರ ಗೋವಿಂದರಾಜು ಮಾತ್ರ ಹಾಜರಾಗಿರಲಿಲ್ಲ. ಆತನ ಸಹೋದರರಾದ ತಿಮ್ಮೇಶ್, ತಿಮ್ಮಪ್ಪ, ತಾಯಿ ತುಳಸಮ್ಮ, ಅತ್ತಿಗೆಯರಾದ ಚಿಕ್ಕತಾಯಮ್ಮ, ಮಂಗಳಮ್ಮ ಮಾತ್ರ ಹಾಜರಿದ್ದರು.

ಸುವರ್ಣಾ ಮೇಲೆ ಅವರ ಪೋಷಕರೇ ಹಲ್ಲೆ ನಡೆಸಿದ್ದಾರೆ. ಆ ಬಳಿಕದ ಬೆಳವಣಿಗೆಯಿಂದ ನಮಗೆ ಹೆದರಿಕೆಯಾಗಿದೆ. ಊರಿನಲ್ಲಿ ನೆಮ್ಮದಿಯಾಗಿ ಇರುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಎಲ್ಲರೂ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.