ಗುಲ್ಬರ್ಗ: ಮುಂದಿನ 10 ವರ್ಷದಲ್ಲಿ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಲಿದೆ. ದೇಶ ನಿರ್ಮಾಣದ ಪ್ರಮುಖ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಿಕ್ಷಣ ತಜ್ಞ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಗುರುವಾರ ಇಲ್ಲಿ ಹೇಳಿದರು.ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅನಂತರಾವ್ ದೇಶಮುಖ್ ಸಭಾಗೃಹದಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ: ಶಿಕ್ಷಕ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಶ್ವದ ಒಟ್ಟು 49 ನಾಗರಿಕತೆಗಳಲ್ಲಿ ಭಾರತೀಯ ನಾಗರಿಕತೆ ಮಾತ್ರ ಉಳಿದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ; ಭಾರತದಲ್ಲಿ ಬೆಳೆದು ಬಂದಿರುವ ಗುರು ಪರಂಪರೆ. ಹೊಯ್ಸಳ, ವಿಜಯನಗರದಂತಹ ಮಹಾನ್ ಸಾಮ್ರಾಜ್ಯಗಳು ತಲೆ ಎತ್ತಲು ಗುರುವಿನ ಆದೇಶವೊಂದೇ ಕಾರಣವಾಗಿತ್ತು. ಗುರು ನುಡಿದ ವಾಖ್ಯೆಗಳೇ ವಿದ್ಯಾರ್ಥಿ ಬದುಕಿನ ದಾರಿದೀಪಗಳಾಗುವ ವ್ಯವಸ್ಥೆ ಈಗಲೂ ಇದೆ ಎಂದರು.
ಪ್ರಸ್ತುತ ವಿದ್ಯಾರ್ಥಿಗಳನ್ನು ಮಾತ್ರವಲ್ಲ; ಅವರ ತಂದೆ-ತಾಯಿಗಳನ್ನು ತಿದ್ದುವಂತಹ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದೆ. ಆತ್ಮಸ್ಥೈರ್ಯ, ಬದ್ಧತೆ, ಎಲ್ಲರಿಗೂ ಸಮಾನವಾಗಿ ಬೋಧನೆ ಮಾಡುವ, ನಿಸ್ವಾರ್ಥದಿಂದ ದುಡಿಯುವ ಶಿಕ್ಷಕ ನಿಜವಾಗಿಯೂ ರಾಷ್ಟ್ರದ ಸಂಪತ್ತು. ಭಾರತದ ಪ್ರತಿಯೊಬ್ಬ ಶಿಕ್ಷಕ ಆ ಉನ್ನತ ಗುಣಗಳನ್ನು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಭವ್ಯ ಪರಂಪರೆ ಹೊಂದಿರುವ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು, ಮಕ್ಕಳಲ್ಲಿ ಬೆಳೆಸಿಕೊಂಡು ಹೋಗುವ ಮೂಲಕ ಸೂಪರಪವರ್ ಮಟ್ಟ ತಲುಪಬಹುದಾಗಿದೆ ಎಂದರು.ಅರ್.ಎನ್. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.