ADVERTISEMENT

ರೈತರಿಂದ ಪಂಚಾಯ್ತಿ ಕಚೇರಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಹರಪನಹಳ್ಳಿ: ಹಸಿರುಹೊನ್ನು ಯೋಜನೆಯ ಅಡಿ ಹೊಂಗೆ ಸಸಿ ನಾಟಿ ಮಾಡಿದ ಫಲಾನುಭವಿ ರೈತರ ಹಣ ಬಿಡುಗಡೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿರುವ ಪಂಚಾಯ್ತಿ ಅಧಿಕಾರಿಗಳ ಕ್ರಮ ಖಂಡಿಸಿ ಫಲಾನುಭವಿ ರೈತರು ಹಾಗೂ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲಹಳ್ಳಿ ಗೋಣೆಪ್ಪ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಒಂದೂವರೆ ವರ್ಷದ ಹಿಂದೆ ನೂರಾರು ರೈತರು ತಮ್ಮ ಜಮೀನಿನ ಬದುಗಳಲ್ಲಿ ಹೊಂಗೆ ಸಸಿ ನಾಟಿ ಮಾಡಿದ್ದಾರೆ. ಹೊಲ-ಮನೆಗೆಲಸ ಬಿಟ್ಟು ಸಾವಿರಾರು ರೂ ಖರ್ಚುಮಾಡಿ, ಗುಂಡಿ ಹೊಡೆದು ಸಸಿ ನೆಟ್ಟಿದ್ದಾರೆ. ಅದರ ಹಣ ಪಾವತಿಸುವಂತೆ ಹಲವಾರು ಬಾರಿ ಅಧಿಕಾರಿಗಳನ್ನು ಕೇಳಿದರೂ ಪ್ರಯೋಜನವಾಗಿಲ್ಲ. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಳಿ ವಿಷಯ ಪ್ರಸ್ತಾಪಿಸಿದರೂ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಎಚ್. ಹನು ಮಂತಪ್ಪ, ಎಚ್. ಪ್ರಕಾಶ್, ಡಿ. ಚನ್ನ ವೀರಪ್ಪ ಇತರರು ಪಾಲ್ಗೊಂಡಿದ್ದರು.
ಪಂಚಾಯ್ತಿ ವ್ಯಾಪ್ತಿಯ ರೈತರು ಶಕ್ತಾನುಸಾರ 100ರಿಂದ 300ರವರೆಗೂ ಹೊಂಗೆ ಸಸಿ ನಾಟಿ ಮಾಡಿದ್ದಾರೆ.

ಒಬ್ಬೊಬ್ಬ ರೈತರಿಂದಲೂ ನಾಟಿ ಮಾಡಿದ ಹಣ ಬಿಡುಗಡೆ ಮಾಡಿಸಿಕೊಡುವುದಕ್ಕಾಗಿ ತಲಾ ರೂ 300 ವಸೂಲಿ ಮಾಡಿದ್ದಾರೆ. ಇತ್ತ ಕೊಟ್ಟ ಹಣವೂ ಇಲ್ಲ; ಅತ್ತ ಬಿಕ್ ಪಾವತಿಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಢಾಪೆತನದಿಂದ ಮಾತನಾಡುತ್ತಾರೆ ಎಂದು ದೂರಿದರು.

ಮುಖಂಡರಾದ ಎಚ್. ಹನುಮಂತಪ್ಪ, ಎಚ್. ಪ್ರಕಾಶ್, ಡಿ. ಚನ್ನವೀರಪ್ಪ, ಜಿ. ಕರಿಯಪ್ಪ, ಕೆ. ಮಂಜಪ್ಪ, ನಾಗೇಂದ್ರಪ್ಪ, ಆರ್. ಮಾನಪ್ಪ, ಕೆ.ಎಂ. ಕೋಟೆಪ್ಪ, ಬಸಪ್ಪ, ನಾಗರಾಜಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.