ADVERTISEMENT

ಲೋಕಾಯುಕ್ತ ಬಲೆಗೆ ಪಿಡಿಒ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ವಿಜಾಪುರ/ಸಿಂದಗಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಸಲು ಲಂಚ ತೆಗೆದುಕೊಳ್ಳುತ್ತಿದ್ದ ಆರೋಪದ ಮೇರೆಗೆ ಸಿಂದಗಿ ತಾಲ್ಲೂಕು ಮೋರಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಲಿಂಗ ಹಡಪದ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹಂಚಿನಾಳ ಗ್ರಾಮದ ಶಿವಣ್ಣ ಬಿರಾದಾರ ಎಂಬುವವರು ಉದ್ಯೋಗ ಖಾತ್ರಿ ಯೋಜನೆಯಡಿ 2009-10ನೇ ಸಾಲಿನಲ್ಲಿ ರಸ್ತೆ ಕಾಮಗಾರಿ ನಿರ್ವಹಿಸಿದ್ದರು. ಅದಕ್ಕೆ 1.08 ಲಕ್ಷ ರೂಪಾಯಿ ಬಿಲ್ ಪಾವತಿಸಬೇಕಿತ್ತು. ಈ ಬಿಲ್ಲಿನ ಮೊತ್ತದ ಶೇ 10ರಷ್ಟು ಹಣವನ್ನು ಲಂಚದ ರೂಪದಲ್ಲಿ ಕೊಡುವಂತೆ ಪಿಡಿಒ ಹಡಪದ ಬೇಡಿಕೆ ಇಟ್ಟಿದ್ದರು ಎಂದು ಶಿವಣ್ಣ ದೂರು ನೀಡಿದ್ದರು ಎಂದು ಲೋಕಾಯುಕ್ತ ಡಿವೈಎಸ್ಪಿ ವಿ.ಬಿ. ಮಡಿವಾಳರ ತಿಳಿಸಿದ್ದಾರೆ.

`ಸಿಂದಗಿಯ ಕಲ್ಯಾಣ ನಗರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಲಂಚ ಪಡೆಯುತ್ತಿದ್ದ ಹಡಪದ ಅವರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದರು. ಇವರು ತಮ್ಮ ಮಾವ ಚಿಕ್ಕಸಿಂದಗಿ ಗ್ರಾಮದ ಉಮ್ಮಣ್ಣ ನಾವಿ ಅವರ ಮೂಲಕ ಈ ಲಂಚ ಪಡೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಗುರುಲಿಂಗ ಹಡಪದ ಅವರು ಮೋರಟಗಿ ಗ್ರಾಮ ಪಂಚಾಯಿತಿಯಿಂದ ವರ್ಗಾವಣೆಗೊಂಡಿದ್ದರು. ಆದರೂ ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟಾರೆ ಲಂಚದ ಹಣದಲ್ಲಿ ತನಗೆ 5,000 ರೂಪಾಯಿ ಹಾಗೂ ಮುಂದೆ ಬರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ 5,000 ರೂಪಾಯಿ ನೀಡುವಂತೆ ತಿಳಿಸಿದ್ದರು ಎಂದು ಮಡಿವಾಳರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.