ಹಳೇಬೀಡು: ಮಲಯಪ್ಪನ ಕೊಪ್ಪಲಿನಲ್ಲಿ ವಾಂತಿಭೇದಿಯಿಂದ ಮೂವರು ಮೃತಪಟ್ಟು, ಹುಲಿಕೆರೆ, ಚೀಲನಾಯ್ಕನಹಳ್ಳಿ ಹಾಗೂ ದ್ಯಾವಪ್ಪನ ಹಳ್ಳಿ ಗ್ರಾಮಗಳಲ್ಲಿ ಹಲವು ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಗ್ರಾ.ಪಂ. ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ರೋಗ ಹರಡದಂತೆ ಜನರು ಎಚ್ಚರ ವಹಿಸಬೇಕು ಎಂದು ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ನೀರಿನ ತೊಟ್ಟಿ ಹಾಗೂ ಸುತ್ತಲಿನ ಪರಿಸರದ ಪರಿಶೀಲನೆ ನಡೆಸಿದರು. ಸ್ವಚ್ಛತೆ ಕಡೆ ಗಮನ ಹರಿಸುವಂತೆ ಮನೆ ಮಾಲಿಕರಿಗೆ ಕರಪತ್ರ ನೀಡಲಾಯಿತು.
ಗ್ರಾಪಂ.ನಿಂದ ಸ್ಚಚ್ಛತಾ ಕೆಲಸವೂ ಬಿರುಸಿನಿಂದ ಸಾಗುತ್ತಿದೆ. ಗ್ರಾಪಂ ಅಧ್ಯಕ್ಷ ನಿಂಗಪ್ಪ, ಉಪಾಧ್ಯಕ್ಷ ಜಿಯಾವುಲ್ಲಾ, ಪಿಡಿಒ ಸೋಮಶೇಖರ್ ಹಾಗೂ ಸದಸ್ಯರು ಪಾಲ್ಗೊಂಡು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯದಿಂದ ಹೂಳು ತುಂಬಿಕೊಂಡಿದ್ದ ಚರಂಡಿಗೆ ಮುಕ್ತಿ ದೊರಕಿದೆ. ರಸ್ತೆ ಬದಿಯ ತಿಪ್ಪೆಗಳನ್ನು ತೆರವಿಗೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ತಿಪ್ಪೆಗಳನ್ನು ಖಾಲಿ ಮಾಡದಿದ್ದರೆ ನೆಲಸಮ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ನಾಗರಿಕರಲ್ಲಿ ವಾಂತಿ ಭೇದಿ ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರು ಇಲಾಖೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕಾರ ನೀಡಬೇಕು. ವಾಂತಿ ಭೇದಿ ಪ್ರಕರಣ ಕಂಡುಬಂದರೆ ಈ ನಂಬರ್ಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರ ಹಳೇಬೀಡು (08177-273022), ಸರೋಜಮ್ಮ(9632456645), ಸೋಮಪ್ರಭ (9731360850), ವಿರೂಪಾಕ್ಷಮ್ಮ (9448920086) ಹೇಮಾವತಿ (9611602462), ಜಯಲಕ್ಷ್ಮಿ(9480565831), ಉಷಾ (97419 32974).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.