ADVERTISEMENT

ವಾಲ್ಮೀಕಿಗೆ ಅವಮಾನ ಖಂಡಿಸಿ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಚಳ್ಳಕೆರೆ: ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ಸಮೀಪದ ಶಾಂತಿಪುರದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಶುಕ್ರವಾರ ತಳಕು ಗ್ರಾಮದಿಂದ ಚಳ್ಳಕೆರೆ ತಾಲ್ಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ಬೇಡನಾಗಿ ಹುಟ್ಟಿ ಹಿಂಸೆಯನ್ನು ತ್ಯಜಿಸಿ, ಲೋಕಕ್ಕೆ ಅಹಿಂಸೆಯ ಅಮೃತವಾಣಿ ಉಣಬಡಿಸಿದ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡುವ ಮೂಲಕ ಇಡೀ ಸಮುದಾಯವನ್ನು ಅವಮಾನಿಸಲಾಗಿದೆ. ಇಂತಹ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥ ಕಿಡಿಗೇಡಿಗಳನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ಪರಿವರ್ತನೆಯ ತತ್ವಗಳನ್ನು ಜನತೆಗೆ ಬಿತ್ತಿಹೋದ ದಾರ್ಶನಿಕರನ್ನು ಅವಮಾನಿಸುವುದು ಅತ್ಯಂತ ಖಂಡನೀಯ. ನಾಗರಿಕ ಸಮಾಜದಲ್ಲಿ ಎಲ್ಲಾ ಸಮುದಾಯಗಳು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿರುವಾಗ ಕಿಡಿಗೇಡಿಗಳು ಮಾಡಿದ ಇಂತಹ ಕೃತ್ಯಗಳಿಂದ ಸಾಮಾಜಿಕ ವಾತಾವರಣ ಕಲುಷಿತಗೊಳ್ಳುವಂತಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

 ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಕಾಲ್ನಡಿಗೆಯಲ್ಲಿ ಪಾಲ್ಗೊಂಡವರಿಗೆ ವಕೀಲ ಅಶ್ವತ್ಥ್ ನಾಯಕ ಬುಡ್ನಹಟ್ಟಿ ಹತ್ತಿರದಲ್ಲಿ ಉಪಾಹಾರ ವ್ಯವಸ್ಥೆ ಮಾಡಿದ್ದರು.

ಕರವೇ ಅಧ್ಯಕ್ಷ ಟಿ.ಜೆ. ವೆಂಕಟೇಶ್, ಜಿ.ಆರ್. ಅಶ್ವತ್ಥನಾಯಕ, ಎಂ. ಚೇತನ್‌ಕುಮಾರ್, ಜಿ.ಟಿ. ಗೋವಿಂದರಾಜ್, ಅಬ್ಬೇನಹಳ್ಳಿ ರೇವಣ್ಣ, ನೇರಲಗುಂಟೆ ತಿಪ್ಪೇಸ್ವಾಮಿ, ಕಾಲುವೇಹಳ್ಳಿ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ವರವು ಬೊಮ್ಮಣ್ಣ, ಜೆ. ತಿಪ್ಪೇಶ್‌ಕುಮಾರ್, ಸಿ.ಟಿ. ಶ್ರೀನಿವಾಸ್, ತಿಪ್ಪೇಸ್ವಾಮಿ, ಪಾಲಯ್ಯ, ಬಸವರಾಜ, ದೊರೆಬೈಯ್ಯಣ್ಣ, ಎಲ್‌ಐಸಿ ತಿಪ್ಪೇಸ್ವಾಮಿ, ಗುರುಸ್ವಾಮಿ, ಜಿ.ಟಿ. ವೀರಭದ್ರಪ್ಪ, ಪಿ. ತಿಪ್ಪೇಸ್ವಾಮಿ, ತಳಕು ಮಹಾಂತೇಶ್, ಚಂದ್ರಣ್ಣ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.