ವಿಜಾಪುರ: ಚಿಕ್ಕ ಮಕ್ಕಳ ರಕ್ತನಾಳಗಳಲ್ಲಿ ಉರಿ, ಊತ ಉಂಟುಮಾಡುವ `ಕಾವಾಸಾಕಿ~ ಹೆಸರಿನ ರೋಗವನ್ನು ಇಲ್ಲಿಯ ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರು ಪತ್ತೆ ಮಾಡಿದ್ದಾರೆ.
`ಈ ಮಾರಕ ಕಾಯಿಲೆ ವಿಜಾಪುರ ಜಿಲ್ಲೆಗೆ ಕಾಲಿರಿಸಿದ್ದು, ಆರು ತಿಂಗಳ ಅವಧಿಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಅವರೆಲ್ಲರೂ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ~ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಸ್.ಬಿ. ಪಾಟೀಲ ತಿಳಿಸಿದ್ದಾರೆ.
ಜಪಾನ್ ಮೂಲದ ಮಕ್ಕಳ ತಜ್ಞ ಡಾ.ತೊಮಿಸಕು ಕಾವಾಸಾಕಿ ಅವರು 1967ರಲ್ಲಿ ಈ ರೋಗವನ್ನು ಮೊದಲಿಗೆ ಗುರುತಿಸಿದ ಕಾರಣ ಅವರ ಹೆಸರಿನಿಂದಲೇ ಈ ರೋಗವನ್ನು ಕರೆಯಲಾಗುತ್ತಿದೆ.
ರೋಗದ ಲಕ್ಷಣಗಳು: ಐದು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಜ್ವರದಿಂದ ಬಳಲುವುದು. ತೊಡೆಯ ಸಂದಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು. ಕಣ್ಣುಗಳ ಬಣ್ಣ ರಕ್ತಗೆಂಪು ಬಣ್ಣಕ್ಕೆ ತಿರುಗುವುದು. ತುಟಿಗಳು ಊದಿ ಸೀಳುವುದು. ನಾಲಿಗೆ ಕಂದು- ಕೆಂಪು ಬಣ್ಣಕ್ಕೆ ತಿರುಗುವುದು. ನಾಲಿಗೆ ಮೇಲ್ಪದರ ಸುಲಿದು ಹೋಗುವುದು. ಕೈ ಮತ್ತು ಕಾಲುಗಳು ಊದಿಕೊಳ್ಳುವುದು ಮತ್ತು ಅಲ್ಲಿನ ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿದ ಮಕ್ಕಳು ಅತೀವ ನರಳಾಟದಿಂದ ಬಳಲುತ್ತವೆ.
ರೋಗಕ್ಕೆ ಚಿಕಿತ್ಸೆ ಲಭ್ಯವಿದ್ದು, ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕು~ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.