ಮಡಿಕೇರಿ: ಕುಟುಂಬದ ಯಜಮಾನನಿಗೆ ಮುದ್ದಿನ `ಮಗು~ವಾಗಿ, ಆತನ ಮಕ್ಕಳಿಗೆ ಜೊತೆಗಾರನಾಗಿ, ಹಾಡಿಯ ಸದಸ್ಯನೊಬ್ಬನಾಗಿ ಓಡಾಡಿಕೊಂಡಿದ್ದ `ಶಿವ~ನೆಂಬ ಮರಿಯಾನೆ ಈಗ ಉಸಿರಾಟದ ತೊಂದರೆಯಿಂದ ನೆಲಹಿಡಿದಿದೆ.
ಹಾರಂಗಿ ಜಲಾಶಯದ ಹಿನ್ನೀರಿನ ಕಾಡಿನಲ್ಲಿ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಶಿವನನ್ನು ಕುಶಾಲನಗರದ ಬಳಿಯಿರುವ ಆನೆಕಾಡು ಹಾಡಿಯ ಗಿರಿಜನರು ತಮ್ಮದೇ ಕುಟುಂಬದ ಸದಸ್ಯ ಎನ್ನುವಂತೆ ಸಾಕಿದ್ದಾರೆ.
ಗಿರಿಜನರ ಪ್ರೀತಿಯ ಆರೈಕೆಯಲ್ಲಿ ಭರ್ತಿ ಒಂದು ವರ್ಷ ಪೂರೈಸಿರುವ `ಶಿವ~ ಮೊನ್ನೆಯಿಂದ ನೆಲಹಿಡಿದಿದ್ದಾನೆ.
`ಶಿವ~ನ ಈ ಅವಸ್ಥೆಯಿಂದ ಹಾಡಿಯಲ್ಲಿ ಆತಂಕ ಮನೆ ಮಾಡಿದೆ. ಹಾಡಿಯ ವಾಸಿಗಳು ಕುಟುಂಬದ ಸದಸ್ಯನೊಬ್ಬ ಜೀವನದ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದಾನೆ ಎನ್ನುವಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹೇಗಾದರೂ ಮಾಡಿ `ಶಿವ~ನನ್ನು ಬದುಕಿಸಿಕೊಡಿ ಎಂದು ವೈದ್ಯಾಧಿಕಾರಿಗಳನ್ನು ಅಂಗಲಾಚುತ್ತಿದ್ದಾರೆ.
ಪಶುವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿಗಳು ಆ್ಯಂಟಿಬಯೋಟಿಕ್ಸ್, ಗ್ಲುಕೋಸ್ ಹಾಗೂ ನೀರು ಕುಡಿಸುತ್ತಿದ್ದಾರೆ. ಶಿವನ ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮತ್ತೊಂದೆಡೆ `ಶಿವ~ನ ದೇಹದ ಉಷ್ಣಾಂಶವು 90 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆಯಾಗಿದೆ. ಇದನ್ನು ಸಾಮಾನ್ಯ ಮಟ್ಟಕ್ಕೆ (98 ಡಿಗ್ರಿ ಸೆಲ್ಸಿಯಸ್ಗೆ) ತರಲು ಪಶು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬಂದರೆ ಹಾಗೂ ನಾವು ನೀಡುತ್ತಿರುವ ಔಷಧಕ್ಕೆ `ಶಿವ~ ಸ್ಪಂದಿಸಿದರೆ ಯಾವುದೇ ಅಪಾಯವಿಲ್ಲ ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಉಮಾಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.
ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶ ಯಡವಾರೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ `ಶಿವ~ ಪತ್ತೆಯಾಗಿದ್ದ. ತಾಯಿ ಆನೆಯು ಹೆರಿಗೆ ನಂತರ ಮೃತಪಟ್ಟಿತ್ತು. ನಂತರ ಮರಿ ಆನೆಯನ್ನು ಕುಶಾಲನಗರದ ಬಳಿಯ ಆನೆಕಾಡು ಶಿಬಿರಕ್ಕೆ ತಂದು ಗಿರಿಜನರಿಗೆ ಸಾಕಲು ನೀಡಲಾಗಿತ್ತು. ತಾಯಿ ಆನೆಯ ಪ್ರೀತಿ, ಮಮತೆ ತುಂಬುವಲ್ಲಿ ಗಿರಿಜನರು ಶಕ್ತಿ ಮೀರಿ ಪ್ರಯತ್ನಿಸಿದ್ದರು. ಆದರೆ, ತಾಯಿ ಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಮಾತ್ರ ತುಂಬುವಲ್ಲಿ ಸಾಧ್ಯವಾಗಲಿಲ್ಲ.
ರೋಗ ನಿರೋಧಕ ಶಕ್ತಿ ಕಮ್ಮಿ: ಹುಟ್ಟಿದ ತಕ್ಷಣವೇ ತಾಯಿಯಿಂದ ಬೇರ್ಪಟ್ಟ `ಶಿವ~ನಿಗೆ ತಾಯಿ ಹಾಲು ದೊರೆತಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ ತಾಯಿ ಹಾಲು ದೊರೆಯದೆ `ಶಿವ~ ನಿಶಕ್ತನಾಗಿಯೇ ಬೆಳೆದ. ಇದರಿಂದ ಸಣ್ಣ ಕಾಯಿಲೆ, ಸೋಂಕು ಎದುರಿಸುವ ಶಕ್ತಿ ಆನೆಯ ದೇಹಕ್ಕೆ ಇರುವುದಿಲ್ಲ ಎಂದು ಶುಶ್ರೂಷೆ ಮಾಡುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದರು. ಹಸುವಿನ ಹಾಲು, ರಾಗಿ ಮುದ್ದೆ ಹಾಗೂ ಬಿದಿರಿನ ಸೊಪ್ಪು ಸೇವಿಸಿ `ಶಿವ~ ಇದುವರೆಗೆ ಬದುಕಿದ್ದು ಒಂದು ಪವಾಡವೇ ಸರಿ ಎನ್ನುತ್ತಾರೆ ಹಾಡಿಯ ಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.