ಗುಲ್ಬರ್ಗ: ಸಸಿಗಳು ಬೆಳೆದು ಮರವಾಗುವ ತನಕ ಅವುಗಳನ್ನು ಮಕ್ಕಳಂತೆ ಪೋಷಿಸುವ ಅಗತ್ಯವಿದೆ ಎಂದು ಗುಲ್ಬರ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಶನಿವಾರ ಇಲ್ಲಿ ಸಲಹೆ ನೀಡಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್ಕೆಇಎಸ್)ಯ ಗುಲ್ಬರ್ಗ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ `ಎಚ್ಕೆಇಎಸ್ ಸಂಸ್ಥೆಗಳ ಹಸಿರು-2012~ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುಲ್ಬರ್ಗದಲ್ಲಿರುವ ಎಚ್ಕೆಇ ಸಂಸ್ಥೆಯ ಎಲ್ಲ ಕಾಲೇಜುಗಳ ಸುತ್ತ ಸಸಿ ಬೆಳೆಸಲು ಒಟ್ಟು 3,500 ಸಸಿಗಳಿಗೆ ಬೇಡಿಕೆ ಇದೆ. ಬೀದರ್ ಮತ್ತು ರಾಯಚೂರಿನಲ್ಲಿರುವ ಎಚ್ಕೆಇ ಕಾಲೇಜುಗಳ ಸುತ್ತ 1,200 ಸಸಿಗಳಿಗೆ ಬೇಡಿಕೆ ಕೊಡಲಾಗಿದೆ. ಅತಿಯಾದ ತಾಪಮಾನದಿಂದ ಬಳಲುವ ಈ ಭಾಗದಲ್ಲಿ ಮರ ಬೆಳೆಸುವುದನ್ನು ಅರಣ್ಯ ಇಲಾಖೆ ಸದಾ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.
5,000 ಸಸಿಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಪ್ರತಿವರ್ಷ ಸುಮಾರು ರೂ. 5.5 ಲಕ್ಷ ಹಣ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಎಚ್ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಮಾತನಾಡಿ, `ಜುಲೈ 5ರ ಒಳಗಾಗಿ ಸಂಸ್ಥೆಯ ಎಲ್ಲ ಆವರಣದಲ್ಲಿ ಸಸಿ ನೆಡುವ ಕಾರ್ಯ ಮುಗಿಯಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕು. ಕ್ಯಾಂಪಸ್ ಸುಂದರವಾಗಿ ಕಂಗೊಳಿಸಲು ಹಸಿರು ಬೆಳೆಸುವುದು ಮುಖ್ಯ~ ಎಂದು ಹೇಳಿದರು.
ನರೇಂದ್ರ ಬಡಶೇಶಿ ನಿರೂಪಿಸಿದರು. ಡಾ. ಸಂಪತ್ ರಾವ್ ಸ್ವಾಗತಿಸಿದರು. ಸಿದ್ಧಲಿಂಗ ಮಾಲಿಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.