ADVERTISEMENT

ಸಿದ್ದಗಂಗೆ ರಥೋತ್ಸವಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ತುಮಕೂರು: ಅಲ್ಲಿ ಸೇರಿದ್ದ ಜನರ ಶ್ರದ್ಧಾ-ಭಕ್ತಿಯ ಸಂಕೇತವಾಗಿ ಎಲ್ಲವೂ ಸಲೀಸಾಗಿ- ಸುಲಲಿತವಾಗಿ ನೆರವೇರಿತು. ಆಸ್ತಿಕರ ಮನಸ್ಸಿನ ಭಕ್ತಿಯನ್ನು ಅಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿನಿಧಿಸುತ್ತಿದ್ದವು. ಸಾವಿರಾರು ಜನರು ರಥೋತ್ಸಕ್ಕೆ ಸಾಕ್ಷಿಯಾದರು.

ಶಿವನಿಲ್ಲದೆ ಸೌಂದರ್ಯವೇ? ಎಂಬ ಮಾತಿಗೆ ತಕ್ಕಂತೆ ಕ್ಯಾತ್ಸಂದ್ರದ ಸಿದ್ದಗಂಗಾ ಮಠದಲ್ಲಿ ಶಿವರಾತ್ರಿಯ ಮರುದಿನದ ಮಂಗಳವಾರ ನಡೆದ ರಥೋತ್ಸವದ ದೃಶ್ಯವನ್ನು ಭಕ್ತರು ಕಣ್ಣು ತುಂಬಿಕೊಂಡರು. ಜಾಗರಣೆಯ ದಣಿವು ಸ್ವಲ್ಪವೂ ಕಾಣಲಿಲ್ಲ.

ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದ ಭಕ್ತ ಸಾಗರದಿಂದ ಸಿದ್ದಗಂಗಾ ಕ್ಷೇತ್ರ ತುಂಬಿಹೋಗಿತ್ತು. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಂಭ್ರಮ ರಥೋತ್ಸವದ ದಿನವಾದ ಮಂಗಳವಾರ ಮೇರೆ ಮೀರಿತ್ತು. ಭಕ್ತರ ಸಂಚಾರಕ್ಕೆ ಹೆಚ್ಚಿನ ನಗರ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಕ್ಯಾತ್ಸಂದ್ರದ ಆರಂಭದಿಂದ ಮಠದವರೆಗೆ ಎಡ-ಬಲದಲ್ಲಿ, ಸಣ್ಣ-ಪುಟ್ಟ ಮಕ್ಕಳನ್ನು ಹೆಗಲ ಮೇಲೆ, ಕಂಕುಳಲ್ಲಿ ಹೊತ್ತು ಸಾಗುತ್ತಿದ್ದ ತಾಯಂದಿರ ಕಣ್ಣುಗಳಲ್ಲಿ ರಥೋತ್ಸವದ ಸಂಭ್ರಮ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.