ರಾಯಚೂರು: ಸರ್ಕಾರದ ಯೋಜನೆಗಳನ್ನು ಸಮರ್ಪಕ ರೀತಿ ಅನುಷ್ಠಾನಗೊಳಿಸಲು ಹಾಗೂ ಜನತೆಯ ಆಶೋತ್ತರಕ್ಕೆ ಬೇಗ ಸ್ಪಂದಿಸುವ ದಿಶೆಯಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರದ(ಎನ್ಐಸಿ) ತಾಂತ್ರಿಕ ನೆರವು ಅತ್ಯಂತ ಉಪಯುಕ್ತವಾಗಿದೆ. ಇದರ ಪ್ರಯೋಜನವನ್ನು ಆಡಳಿತ ವರ್ಗ ಸಮರ್ಪಕ ರೀತಿಯಲ್ಲಿ ಪಡೆಯಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಇಲಾಖೆಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆ ಅನುಷ್ಠಾನ, ಆಡಳಿತ ಯಂತ್ರ ಸುಗಮವಾಗಿ ನಡೆಯಲು ಎನ್ಐಸಿಯು ಹೊಸ ಹೊಸ ಸಾಫ್ಟವೇರ್ ಅಭಿವೃದ್ಧಿ ಪಡಿಸುತ್ತಲೇ ಇದೆ. ಈ ಅಂಶಗಳ ಬಗ್ಗೆ ಸರಿಯಾದ ರೀತಿ ತಜ್ಞರಿಂದ ಮಾಹಿತಿ ಪಡೆದು ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ ಅಲ್ಪ ಸಮಯದಲ್ಲಿ ಜನತೆಗೆ ಹೆಚ್ಚಿನ ಮತ್ತು ಉತ್ತಮ ಸೇವೆ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ರಾಯಚೂರು ಪ್ರಭಾರ ಸಹಾಯಕ ಆಯುಕ್ತ ಯೋಗೇಶ ಮಾತನಾಡಿ, ಪಾರದರ್ಶಕ ಆಡಳಿತ ಕಲ್ಪಿಸುವಲ್ಲಿ ತಂತ್ರಜ್ಞಾನ ಬಹುಮಟ್ಟಿಗೆ ಸಹಕಾರಿಯಾಗಿದೆ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನೆಡೆ, ಜನತೆಯ ಅರ್ಜಿಗಳು ಯಾವ ಹಂತದಲ್ಲಿವೆ? ಎಲ್ಲಿ ವಿಳಂಬ ಆಗುತ್ತಿದೆ? ಯಾರು ಹೊಣೆಗಾರರು ಎಂಬುದೆಲ್ಲವೂ ಇ-ಆಡಳಿತದಿಂದ ಬೇಗ ಬಯಲಾಗುತ್ತದೆ. ಬಹಳಷ್ಟು ಸಾಫ್ಟವೇರ್ ಇದ್ದರೂ ಸಮರ್ಪಕ ರೀತಿ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಎನ್ಐಸಿ ತಾಂತ್ರಿಕ ಅಧಿಕಾರಿಗಳಾದ ಕೆ.ವಿ ರಾಮಮೂರ್ತಿ, ಎಂ.ಎಂ ಶೆಟ್ಟಿ, ಪಿ.ಎಸ್ ಭಟ್, ಎನ್ಐಸಿ ಜಿಲ್ಲಾ ಅಧಿಕಾರಿ ರವಿಶೇಖರ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.