ಹಾವೇರಿ: ಬೆಳಗಾವಿಯಲ್ಲಿ ನಿರ್ಮಿಸಲಾದ ಸುವರ್ಣಸೌಧ ಕಟ್ಟಡದ ಉದ್ಘಾಟನೆಗಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಲು ಆ.16 ರಂದು ಗುರುವಾರ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.
66ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಗಳ ಜತೆ ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದರು.
ಸುವರ್ಣಸೌಧವನ್ನು ಸೆಪ್ಟಂಬರ್ನಲ್ಲಿ ಉದ್ಘಾಟಿಸುವ ಚಿಂತನೆ ನಡೆದಿದ್ದು, ಇದಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡುವುದರ ಜತೆಗೆ ಅವರು ಆ ತಿಂಗಳು ಯಾವ ದಿನಾಂಕ ನೀಡುತ್ತಾರೆಯೋ ಅದೇ ದಿನದಂದು ನೂತನ ಕಟ್ಟಡ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಟಾಟಾ ಮೆಟಾಲಿಕ್ ಪ್ರಗತಿಯಲ್ಲಿ: ಹಾವೇರಿ ತಾಲ್ಲೂಕಿನ ಅಗಡಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ತಿಂಗಳು 3 ರಂದು ಟಾಟಾ ಕಂಪೆನಿ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ . ಕೇಂದ್ರ ಸರ್ಕಾರ ಅದಿರು ಗಣಿಗಾರಿಕೆ ನಡೆಸುವುದಕ್ಕೆ ನಿಷೇಧ ಹೇರಿದ್ದರಿಂದ ಕಾರ್ಖಾನೆ ಸ್ಥಾಪನೆ ವಿಳಂಬವಾಗಿದೆ ಹೊರತೂ ಬೇರೆ ಯಾವುದೇ ಕಾರಣವಿಲ್ಲ.
ಶೀಘ್ರದಲ್ಲಿಯೇ ಕಾರ್ಖಾನೆ ಸ್ಥಾಪನೆ ಬಗ್ಗೆ ಟಾಟಾ ಕಂಪೆನಿ ಅಧಿಕೃತ ಘೋಷಣೆ ಮಾಡಲಿದೆ. ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ ಈಗಾಗಲೇ 202 ಕಿ.ಮೀ.ವರೆಗೆ ಬಂದಿದ್ದು, ಈ ವರ್ಷ ಹಾವೇರಿ ತಾಲ್ಲೂಕಿನ ಗಡಿವರೆಗೆ ನೀರು ಹರಿಯಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.