ರಾಯಚೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮನೋಜಕುಮಾರ ಜೈನ್ ಹಾಗೂ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಸೈಬರ್ ಕೆಫೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮಾಹಿತಿಯನ್ನು ಖಾಸಗಿ ಸೈಬರ್ ಕೆಫೆಗಳಲ್ಲಿ ದಾಖಲಿಸುತ್ತಿರುವುದು ಪತ್ತೆಯಾಯಿತು.
ಗೌಪ್ಯತೆ ಕಾಪಾಡುವ ನಿಯಮ ಉಲ್ಲಂಘಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಈ ಕೆಲಸ ಮಾಡುತ್ತಿದ್ದರು. ಶಿವಂ ಆಸ್ಪತ್ರೆ ಪಕ್ಕದ ಐಜೋನ್, ರೈಲ್ವೆ ಸ್ಟೇಶನ್ ರಸ್ತೆಯ ಎಸ್ಎಸ್ಐಟಿ ಹಾಗೂ ತಹಶೀಲ್ದಾರ್ ಕಚೇರಿ ಹತ್ತಿರದ ಎರಡು ಸೈಬರ್ ಕೆಫೆಗಳಿಗೆ ಭೇಟಿ ನೀಡಿದರು.
ರಾಯಚೂರು ತಾಲ್ಲೂಕಿನ ಸಗಮಕುಂಟಾ, ಯರಗೇರಾ, ಚಂದ್ರಬಂಡಾ ಸೇರಿದಂತೆ ಸುಮಾರು 15 ಗ್ರಾ.ಪಂ. ಹಾಗೂ ಮಾನ್ವಿ ತಾಲ್ಲೂಕಿನ ಕುರ್ಡಿ, ದೇವದುರ್ಗ ತಾಲ್ಲೂಕಿನ ಗಬ್ಬೂರು, ಅರಕೇರಾ ಸೇರಿದಂತೆ ಹಲವು ಗ್ರಾ.ಪಂ.ಗಳ ಪಂಚಾಯಿತಿ ಸಿಬ್ಬಂದಿ ಖಾತರಿ ಯೋಜನೆಯ ಕೋಟ್ಯಂತರ ಮೊತ್ತದ ಕಾಮಗಾರಿ, ಯೋಜನೆ ದಾಖಲಾತಿಗಳನ್ನು ಸೈಬರ್ ಕೆಫೆಗಳ ಮೂಲಕವೇ ದಾಖಲಿಸಿರುವುದು ಪತ್ತೆಯಾಯಿತು.
ಸರ್ಕಾರದ ವಿವಿಧ ಕಾಮಗಾರಿಗಳ ಮಾಹಿತಿಯನ್ನು ಗ್ರಾ.ಪಂ.ಗಳಿಗೆ ದೊರಕಿಸಿದ ಕಂಪ್ಯೂಟರ್ಗಳಲ್ಲಿಯೇ ದಾಖಲಿಸಬೇಕು. ಕಂಪ್ಯೂಟರ್ ಸೌಲಭ್ಯ ಇಲ್ಲದಿದ್ದರೆ ತಾಲ್ಲೂಕು ಪಂಚಾಯಿತಿಯ ಕಂಪ್ಯೂಟರ್ಗಳಲ್ಲಿ ದಾಖಲಿಸಲು ಅವಕಾಶವಿದೆ. ಆದರೆ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಸರ್ಕಾರದ ಯೋಜನೆ ದಾಖಲೆ, ಮಾಹಿತಿ ದಾಖಲೆಗೆ ಅವಕಾಶವಿಲ್ಲ. ಇದು ಸರ್ಕಾರದ ನಿಯಮದ ಪ್ರಕಾರ ದಾಖಲೆ ಗೌಪ್ಯತೆ ಮತ್ತು ನಿಯಮ ಉಲ್ಲಂಘನೆ ಎಂದು ಮಹಮ್ಮದ್ ಯೂಸೂಫ್ ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮ: ರಾಯಚೂರು ತಾಲ್ಲೂಕಿನ 15 ಗ್ರಾ.ಪಂ. ಸೇರಿದಂತೆ ಇತರ ಕಡೆಯ ಪಂಚಾಯಿತಿ ಸಿಬ್ಬಂದಿ ಖಾಸಗಿ ಸೈಬರ್ ಕೆಫೆಗಳ ಮೂಲಕ ಎನ್ಆರ್ಇಜಿ ದಾಖಲಾತಿ, ಮಾಹಿತಿ ದಾಖಲಿಸಿರುವುದು ಪತ್ತೆಯಾಗಿದೆ.
ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಇಂಥ ಪಂಚಾಯಿತಿ ಸಿಬ್ಬಂದಿ ಸೈಬರ್ ಕೆಫೆಗೆ ಬಂದು ಮಾಹಿತಿ ದಾಖಲೆ ಮಾಡಲು ಬಂದಾಗ ಅವರ ಪೂರ್ಣ ವಿವರ ಪಡೆದಿರಬೇಕು. ಒಂದು ವೇಳೆ ಸಂಬಂಧಪಟ್ಟವರ ವಿವರ ಪಡೆಯದೆ ಅನಧಿಕೃತವಾಗಿ ದಾಖಲಾತಿಗೆ ಅವಕಾಶ ಕೊಟ್ಟಿದ್ದರೆ ಅದೂ ಅಪರಾಧ ಆಗುತ್ತದೆ. ಆ ಬಗ್ಗೆಯೂ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.