ADVERTISEMENT

ಹದಗೆಟ್ಟ ರಸ್ತೆ: ಸಸಿ ನೆಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ವಿಜಾಪುರ: ಇಲ್ಲಿಯ ಹದಗೆಟ್ಟ ರಸ್ತೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಸ್ವಾಮಿ ವಿವೇಕಾನಂದ ಸೇನೆಯವರು ಶುಕ್ರವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ಮೀನಾಕ್ಷಿ ವೃತ್ತ, ಇಬ್ರಾಹಿಂರೋಜಾ ಮುಖ್ಯ ರಸ್ತೆ, ಶಾಪೇಟಿಯ ಶಿಖಾರಖಾನೆ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಜೋಡಗುಮ್ಮಟ ಮುಖ್ಯ ರಸ್ತೆ, ಜಮಖಂಡಿ ರಸ್ತೆ, ದರ್ಗಾ ರಸ್ತೆಗಳಲ್ಲಿಯ ಹೊಂಡಗಳಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನೆಟ್ಟರು.

`ನಗರದ ರಸ್ತೆಗಳೆಲ್ಲ ಹದಗೆಟ್ಟು ಎಲ್ಲೆಡೆ ತೆಗ್ಗು ಬಿದ್ದಿವೆ. ಯಾವುದೇ ಶ್ರಮವಿಲ್ಲದೆ ರಸ್ತೆಗಳ ಮಧ್ಯದಲ್ಲಿಯೇ ಸಸಿಗಳನ್ನು ನೆಟ್ಟೆವು. ಇನ್ನಾದರೂ ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆಗಳನ್ನು ಸುಧಾರಿಸಲಿ ಎಂಬುದೇ ನಮ್ಮ ಕಳಕಳಿ~ ಎಂದು ಪದಾಧಿಕಾರಿಗಳು ಹೇಳಿದರು.

`ಈ ರಸ್ತೆಗಳನ್ನು ಸುಧಾರಿಸಲು ಜನಪ್ರತಿನಿಧಿಗಳಿಗೆ ಆಗದೇ ಇದ್ದರೆ ವಿಜಾಪುರಕ್ಕೆ `ನರಕಾಪುರ~ ಎಂದು ನಾಮಕರಣ ಮಾಡಲಿ~ ಎಂದು ಸೇನೆಯ ಕಾರ್ಯಾಧ್ಯಕ್ಷ ರಾಘು ಅಣ್ಣಿಗೇರಿ ಹೇಳಿದರು.

ಹದಗೆಟ್ಟ ರಸ್ತೆ ಸುಧಾರಿಸಲು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಉತ್ತಮ ರಸ್ತೆ ಹುಡುಕಿಕೊಟ್ಟವರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದರೂ ನಗರ ಶಾಸಕರು, ಜಿಲ್ಲಾ ಆಡಳಿತ ಎಚ್ಚೆತ್ತುಕೊಂಡಿಲ್ಲ. ಇನ್ನಾದರೂ ರಸ್ತೆ ಸುಧಾರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರಧಾನ ಕಾರ್ಯದರ್ಶಿ ಗುರು ಗಚ್ಚಿನಮಠ, ಶರಣಗೌಡ ಬಿರಾದಾರ, ಶಿವಾನಂದ ಮಖಣಾಪುರ  ಎಚ್ಚರಿಸಿದರು. ಈಶ್ವರ ಮಂಜಣ್ಣಿ, ಸ್ವಾಮಿ ಬರಡೋಲಮಠ, ಸಂಗು ಸಂಗಮ, ಸಂತೋಷ ಬಾಗಾದಿ, ಮುತ್ತು ಅಡಕಿ, ನಾಗಪ್ಪ ಕೋಲಾರ, ವಿನೋದ ನನ್ನಾವರೆ, ನಿಂಗಪ್ಪ ದೊಡಮನಿ, ಎನ್.ಎಸ್. ಬಿರಾದಾರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.