ADVERTISEMENT

ಹುಲಿ ಸೆರೆಗೆ ಹರಸಾಹಸ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಗೋಣಿಕೊಪ್ಪಲು: ನಾಗರಹೊಳೆ ಅರಣ್ಯದಂಚಿನ ಕಾನೂರು ಕೋತೂರಿನ ಕೊಟ್ಟಿಗೆಗಳಿಗೆ ನುಗ್ಗಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿರುವ  ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.

ಹುಲಿ ದಾಳಿ ಮಾಡಿರುವ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಬೋನಿಟ್ಟು ಕಾಯುತ್ತಿದ್ದಾರೆ. ಮಂಗಳವಾರ ರಾತ್ರಿ ಬಲಿ ತೆಗೆದುಕೊಂಡಿದ್ದ ಜಾನುವಾರಗಳ ಮಾಂಸವನ್ನು ಬುಧವಾರ ರಾತ್ರಿ ಮತ್ತೆ ತಿಂದು ಹೋಗಿದೆ. ಅದೇ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಬೋನಿಟ್ಟು ಅದರೊಳಗೆ ಮಾಂಸವನ್ನು ತೂಗುಹಾಕಿ ಸೆರೆಹಿಡಿಯಲು ಕಾಯುತ್ತಿದ್ದಾರೆ.

`ಹುಲಿ ಅರಣ್ಯದಂಚಿನ ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದು, ಸದ್ಯದಲ್ಲಿಯೇ ಬೋನಿಗೆ ಬೀಳುವ ನಿರೀಕ್ಷೆ~ ಇದೆ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಮಂದಪ್ಪ ತಿಳಿಸಿದ್ದಾರೆ.

ಈ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಗುರುವಾರ ಸಹಾಯಕ ಅರಣ್ಯ  ಸಂರಕ್ಷಣಾಧಿಕಾರಿ ಬೆಳಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯಾಧಿಕಾರಿ ಮಂದಣ್ಣ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕೋತೂರಿನ ಒಕ್ಕಲಿಗರ ಸುರೇಶ್ ಹಾಗೂ ಸತೀಶ್ ಅವರ ದನದ ಕೊಟ್ಟಿಗೆ ಮೇಲೆ ಮಂಗಳವಾರ ಹುಲಿಯು ದಾಳಿ ಮಾಡಿ 8 ರಾಸುಗಳು ಹಾಗೂ 2 ಮೇಕೆಗಳನ್ನು ಕೊಂದುಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.