ADVERTISEMENT

ಹೊಸ ರಂಗು ಪಡೆದ ಟಿಪ್ಪು ಸುಲ್ತಾನ್ ಉರುಸ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಶ್ರೀರಂಗಪಟ್ಟಣ: ಮೊದಲ ಬಾರಿ ಎಂಬಂತೆ ಟಿಪ್ಪು ಸುಲ್ತಾನ್ ಅವರ 219ನೇ ಉರುಸ್ ಆನೆ, ಕುದುರೆ, ಸಾರೋಟು, ಕವ್ವಾಲಿ ಸಹಿತ ಗುರುವಾರ ಸಡಗರ, ಸಂಭ್ರಮದಿಂದ ನಡೆಯಿತು.

ಸಂದಲ್ (ಪವಿತ್ರ ಗಂಧ) ಸಹಿತ ಉರುಸ್ ಮೆರವಣಿಗೆಗಾಗಿ ಮಹಾರಾಷ್ಟ್ರದಿಂದಲೂ ಆನೆಗಳನ್ನು ತರಿಸಲಾಗಿತ್ತು. ಮಹಾರಾಷ್ಟ್ರದ ಮಾಧವಿ, ಬೆಳಗಾಂನ ಪದ್ಮ, ಹುಬ್ಬಳ್ಳಿಯ ಝಾನ್ಸಿರಾಣಿ ಸೇರಿ 7 ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. 40ಕ್ಕೂ ಹೆಚ್ಚು ಕುದುರೆಗಳು ಪಾಲ್ಗೊಂಡಿದ್ದವು. ಪಟ್ಟಣದ ಮಸ್ಜಿದ್-ಎ-ಅಲಾ (ದೊಡ್ಡ ಮಸೀದಿ)ಯಿಂದ ಗುಂಬಸ್‌ವರೆಗೆ ಆನೆಗಳೂ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು.  ಮೂರು ಸಾರೋಟುಗಳು ಮೆರವಣಿಗೆಯಲ್ಲಿದ್ದವು.

ಟಿಪ್ಪು ಜನ್ಮಸ್ಥಳ ದೇವನಹಳ್ಳಿ, ಬೆಂಗಳೂರು, ಮೈಸೂರಿನಿಂದ ಪವಿತ್ರ ಗಂಧವನ್ನು ತರಲಾಗಿತ್ತು.
ಗಂಜಾಂ ಹಾಗೂ ಶ್ರೀರಂಗಪಟ್ಟಣದಿಂದ ಪ್ರತ್ಯೇಕ ಗಂಧದ ಮೆರವಣಿಗೆ ನಡೆಯಿತು. ಬೆಂಗಳೂರಿನ ವಾರ್ಸಿಯಾ ತಂಡದ ಸೂಫಿ ಪಂಥದ ಮಹಿಳೆಯರು ಉರುಸ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇಸ್ಮಾಯಿಲ್ ಷರೀಫ್ ತಂಡ ಸೇರಿದಂತೆ 10ಕ್ಕೂ ಹೆಚ್ಚು ತಂಡಗಳು ಟಿಪ್ಪುವಿನ ಲಾವಣಿ ಹಾಡುತ್ತಾ 3 ಕಿ.ಮೀ. ದೂರದ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ವರೆಗೆ ಸಾಗಿದವು. ಕವ್ವಾಲಿ ಹಾಡುಗಾರರು ತನ್ಮಯತೆಯಿಂದ ಕನ್ನಡ ಮತ್ತು ಉರ್ದು ಗಾಯನ ಪ್ರಸ್ತುತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.