ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ ಮಾರ್ಚ್ 15ರಂದು ನಡೆಯಲಿದ್ದು, ಈ ಬಾರಿ ಉತ್ಸವದ ಭಾಗವಾಗಿ ಸಾಂಸ್ಕೃತಿಕ ಮತ್ತು ಜಾನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 14 ರಿಂದ 18ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾರ್ಚ್ 14, 15ರಂದು ಜನಪದ ಜಾತ್ರೆ ನಡೆಯಲಿದೆ.
ಪ್ರಭಾತ್ ಕಲಾವಿದರ ತಂಡದ ಕಾರ್ಯಕ್ರಮದ ಮತ್ತು ಶಾಸ್ತ್ರೀಯ ಸಂಗೀತ, ನೃತ್ಯ ರೂಪಕಗಳು ನಡೆಯಲಿವೆ.
ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಬುಧವಾರ ಮೇಲುಕೋಟೆಯಲ್ಲಿ ಸಿದ್ಧತೆಗಳ ಪರಿಶೀಲನೆ ಮತ್ತು ಪೂರ್ವಾವಿ ಸಭೆ ಬಳಿಕ ಶಾಸಕರಾದ ಸಿ.ಎಸ್.ಪುಟ್ಟರಾಜು, ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಪಂ ಸಿಇಒ ಜಯರಾಂ, ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರೂ ಭಾಗವಹಿಸಿದ್ದರು.
ಶಾಸಕ ಸಿ.ಎಸ್. ಪುಟ್ಟರಾಜು ಅವರು, ವೈರಮುಡಿ ಉತ್ಸವಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿದ್ದಾರೆ. ಸರ್ಕಾರ ಉತ್ಸವದ ಆಚರಣೆಗಾಗಿ ರೂ. 5 ಲಕ್ಷ ಬಿಡುಗಡೆ ಮಾಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ ಹೆಚ್ಚುವರಿಯಾಗಿ ರೂ. 10 ಲಕ್ಷ ನೆರವು ಕೋರಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಪ್ರಕಟಿಸಿರುವ ರೂ. 10 ಕೋಟಿ ರೂಪಾಯಿಗಳ ವಿಶೇಷ ಅನುದಾನದಿಂದ ಈ ಕ್ಷೇತ್ರವನ್ನು ಪಾರಂಪರಿಕ ನಗರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ವಿವರಿಸಿದರು.
ವಾಹನಗಳ ಪಾರ್ಕಿಂಗ್, ಕಲ್ಯಾಣಿಗಳು, ಬಯಲು ರಂಗಮಂದಿರಗಳ ನಿರ್ಮಾಣ ಕಾರ್ಯ, ಮೈಸೂರು ಒಡೆಯರು ಉಳಿಯುತ್ತಿದ್ದ ವಿಶ್ರಾಂತಿ ಕೊಠಡಿ ಮತ್ತಿತರ ಸ್ಥಳಳನ್ನು ಪರಿಶೀಲಿಸಿದರು. ಉಪ ವಿಭಾಗಾಧಿಕಾರಿ ಜಿ.ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.