ಮೈಸೂರು: ಸ್ಪಂದನ ಸಂಸ್ಥೆ ವತಿಯಿಂದ `ಸಂಪದ~ (ಸಂಸ್ಕೃತಿ-ಪರಂಪರೆ-ದರ್ಪಣ) ಹೆಸರಿನಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.22ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ ಹೇಳಿದರು. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಾಂತ್ರಿಕತೆ- ಆಧುನಿಕತೆಗಳನ್ನು ಅಪ್ಪಿಕೊಂಡ ಮನಸ್ಸುಗಳಿಗೆ `ಸಂಪದ~ದ ಮೂಲಕ ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆಗಳಾದ ಜನಪದ, ಶಾಸ್ತ್ರೀಯ ಹಾಗೂ ಅಪರೂಪದ ಕರಕುಶಲ ಕಲೆಗಳನ್ನು ಪರಿಚಯಿಸಿ, ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶ ನಮ್ಮದಾಗಿದೆ ಎಂದರು. ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ದೇಶದ ನಾನಾ ಭಾಗಗಳಿಂದ ನಾಟಕ, ಶಾಸ್ತ್ರೀಯ ಸಂಗೀತ, ಜನಪದ ಕಲಾಪ್ರಕಾರಗಳ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ. ನ.22ರಂದು ಸಂಜೆ 4 ಗಂಟೆಗೆ ಅಂಬಾವಿಲಾಸ ಅರಮನೆ ಮುಂಭಾಗದಿಂದ ಮೆರವಣಿಗೆ ಆರಂಭವಾಗಿ, ದೇವರಾಜ ಅರಸು ರಸ್ತೆ, ಮೆಟ್ರೊಪೋಲ್ ವೃತ್ತದ ಮಾರ್ಗವಾಗಿ ಕಲಾಮಂದಿರ ತಲುಪಲಿದೆ. ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.