ಬೆಳಗಾವಿ: ಟೊಮೆಟೊಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಅಸಮಾಧಾನಗೊಂಡ ಕೇದನೂರ ಗ್ರಾಮದ ರೈತ ಹಾಗೂ ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಕಾರ್ಯದರ್ಶಿ ನಾರಾಯಣ ಪಾಟೀಲ, ಒಂದು ಟ್ರಾಕ್ಟರ್ ಟ್ರಾಲಿ ಟೊಮೆಟೊಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಟ್ರಾಕ್ಟರ್ನಲ್ಲಿ ಬಂದ ಅವರು, ಬೆಲೆ ಕುಸಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವೇ ಗಂಟೆಗಳಲ್ಲಿ ಟೊಮೆಟೊ ಖಾಲಿಯಾದವು.
ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ದರ ಸಂಪೂರ್ಣವಾಗಿ ನೆಲಕಚ್ಚಿದೆ. ಕೆ.ಜಿ.ಗೆ ₹ 1 ಕೂಡ ರೈತರಿಗೆ ಸಿಗುತ್ತಿಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 20ರಂತೆ ಮಾರಾಟ ಮಾಡಲಾಗುತ್ತಿದೆ. ಇದರ ಲಾಭ ರೈತರಿಗೆ ದಕ್ಕುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ತಕ್ಷಣ ಸರ್ಕಾರ ಮಧ್ಯೆಪ್ರವೇಶಿಸಬೇಕು. ಪ್ರತಿಯೊಂದು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ, ಜಯಶ್ರೀ ಸೂರ್ಯವಂಶಿ, ಗುರುಗೌಡ ಪಾಟೀಲ, ರಾಮಲಿಂಗ ಕಾಡಪ್ಪನವರ, ವಿರೂಪಾಕ್ಷ ಸೀನನ್ನವರ, ಮಹಾದೇವ ರಾಠೋಡ, ಸಾವಿತ್ರಿ ಹುಡೇದ, ಗಿರೀಶ ಪರ್ವತಮಠ, ಸೀಮಾ ಖೋತ, ಅಕಿಲಾ ಪಠಾಣ, ಆರ್.ಪಿ. ಪಾಟೀಲ, ಎಸ್.ಕೆ. ಕಾಕತರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.