ADVERTISEMENT

8ನೇ ಪರಿಚ್ಛೇದಕ್ಕೆ ತುಳು: ಒಗ್ಗಟ್ಟಿನ ಯತ್ನಕ್ಕೆ ಪಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಮಂಗಳೂರು: ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘಟನೆಗಳು ಒಗ್ಗೂಡಿ ಪ್ರಯತ್ನಿಸಬೇಕು. ತುಳು ಭಾಷಿಗರ ಈ ನ್ಯಾಯಸಮ್ಮತ ಬೇಡಿಕೆಯನ್ನು ಕೇಂದ್ರ ತಕ್ಷಣ ಈಡೇರಿಸಬೇಕು ಎಂಬ ಒಕ್ಕೊರಲ ಬೇಡಿಕೆ ಮೂಲಕ ಎರಡು ದಿನಗಳ ಅಖಿಲ ಭಾರತ ತುಳು ಸಮ್ಮೇಳನ ಪುತ್ತೂರು ತಾಲ್ಲೂಕಿನ ಸವಣೂರಿನಲ್ಲಿ ಶುಕ್ರವಾರ ಆರಂಭವಾಯಿತು.

ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ತುಳು ಭಾಷೆ ಬೆಳವಣಿಗೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ತುಳು ಭಾಷೆಯಲ್ಲಿ ಆಳವಾದ ಅಧ್ಯಯನ ನಡೆಸುವ ಐವರಿಗೆ ಸರ್ಕಾರ ತಲಾ ರೂ. 1 ಲಕ್ಷ ಫೆಲೋಷಿಪ್ ನೀಡುತ್ತಿದೆ. ಆಸಕ್ತರು ತುಳು ಸಂಶೋಧನೆಗೆ ಹೆಚ್ಚಾಗಿ ತೊಡಗಿಸಿಕೊಂಡರೆ ವರ್ಷಕ್ಕೆ 10 ಮಂದಿಗೆ ಫೆಲೋಷಿಪ್ ನೀಡಲೂ ಸರ್ಕಾರ ಸಿದ್ಧ ಎಂದು ಅವರು ಪ್ರಕಟಿಸಿದರು.

ತುಳು ನಾಡಿನವರು ಸತ್ಯ, ಧರ್ಮ, ನೆಲದ ಕಾನೂನಿಗೆ ಹೆದರುವವರು. ಇದರಿಂದಾಗಿಯೇ ಅವರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ತೋರುವಂತಾಗಿದೆ. ಈ ನೆಲದ ಸಂಸ್ಕೃತಿ, ವ್ಯಕ್ತಿತ್ವ ಉಳಿಸುವ ಯತ್ನವನ್ನು ತುಳು ಭಾಷಿಗರು ಮುಂದುವರಿಸಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.

ಶಿಕ್ಷಣ ತಜ್ಞ ಬಿ.ಎ.ವಿವೇಕ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್, ಮಂಗಳೂರು ವಿವಿ ಕುಲಸಚಿವ ಕೆ.ಚಿನ್ನಪ್ಪ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಮಾತನಾಡಿದರು. ಸಮ್ಮೇಳನಕ್ಕೆ ಅನ್ವರ್ಥ ಎಂಬಂತೆ ವಿದ್ಯಾರಶ್ಮಿ ಶಾಲೆ ವಾತಾವರಣ ಪೂರ್ಣ ತುಳುಮಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.