ಹುಬ್ಬಳ್ಳಿ: ವ್ಯಾಪಾರ ಪರವಾನಗಿ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ದೂರು ಆಧರಿಸಿ ಭ್ರಷ್ಟಾಚಾರ ನಿಗ್ರಹದಳದ ಸಿಬ್ಬಂದಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ಮೂರು ಕಡೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದರು.
ಬಂಕಾಪುರ ಚೌಕದಲ್ಲಿರುವ ಪಾಲಿಕೆಯ ವಲಯ 11ರ ಕಚೇರಿ, ಚಿಟಗುಪ್ಪಿ ಆಸ್ಪತ್ರೆ ಮುಖ್ಯ ಕಚೇರಿ ಮೇಲೆ ದಾಳಿ ಮಧ್ಯಾಹ್ನ ದಾಳಿ ನಡೆಸಿದ ಅಧಿಕಾರಿಗಳು ಸಂಜೆ ವರೆಗೂ ತಪಾಸಣೆ ನಡೆಸಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪರವಾನಗಿ ನೀಡಲು ಲಂಚಕ್ಕೆ ಪೀಡಿಸುವ ಹಾಗೂ ಸತಾಯಿಸುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ವ್ಯಾಪಾರ ಪರವಾನಗಿ ನೀಡಲು ಆರೋಗ್ಯಾಧಿಕಾರಿ ನಿರಾಕ್ಷೇಪಣಾ ಪತ್ರ ಸಹ ಬೇಕಾಗುತ್ತದೆ. ಆದ್ದರಿಂದ ಆರೋಗ್ಯಾಧಿಕಾರಿ ಕಚೇರಿಯಲ್ಲೂ ಪರಿಶೀಲನೆ ಮಾಡಲಾಯಿತು ಎಂದು ಎಸಿಬಿ ಸಿಬ್ಬಂದಿ ತಿಳಿಸಿದ್ದಾರೆ.
ಡಿವೈಎಸ್ಪಿ ವಿಜಯಕುಮಾರ ಬಿಸಲಳ್ಳಿ, ಇನ್ಸ್ಪೆಕ್ಟರ್ಗಳಾದ ಪ್ರಮೋದ್ ಯಲಿಗಾರ ಹಾಗೂ ವಿಶ್ವನಾಥ ಕಬ್ಬೂರಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.