ಬೆಂಗಳೂರು: 'ಸರ್ಕಾರಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಕೊರೊನಾ ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ. ದೇಶದಲ್ಲಿ ದೀಪಾವಳಿ ವೇಳೆಗೆ ಕೊರೊನಾ ಶಮನಗೊಳ್ಳಲಿದೆ' ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ತಿಳಿಸಿದರು.
ಅನಂತ ಕುಮಾರ್ ಪ್ರತಿಷ್ಠಾನವು 'ದೇಶ ಮೊದಲು ಸಂವಾದ' ಶೀರ್ಷಿಕೆಯಡಿ ಭಾನುವಾರ ಆಯೋಜಿಸಿದ್ದ 'ಕೋವಿಡ್ ಕಾಲದಲ್ಲಿ ನಾಯಕತ್ವ' ಸಂವಾದ ಸರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ,' ಕೊರೊನಾ ಸೋಂಕಿನ ನಡುವೆಯೂ ರಾಜ್ಯದಲ್ಲಿ ಜನಜೀವನ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ದೇಶದಲ್ಲೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆತ್ಮನಿರ್ಭರ ಪರಿಕಲ್ಪನೆಯಡಿ ರಾಜ್ಯ ಮುಂದೆ ಸಾಗುತ್ತಿದ್ದು, ತೆರಿಗೆ ಸಂಗ್ರಹದಲ್ಲೂ ಯಶಸ್ಸು ಸಾಧಿಸಿದೆ' ಎಂದರು.
ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜುನಾಥ್, 'ರಾಜ್ಯದಲ್ಲಿ ಏಪ್ರಿಲ್ನಲ್ಲಿ 8 ಲ್ಯಾಬೊರೇಟರಿಗಳು ಇದ್ದವು. ಈಗ ಅವುಗಳ ಸಂಖ್ಯೆ 110ಕ್ಕೆ ಏರಿಕೆಯಾಗಿವೆ. ರೆಮಿಡಿಸಿವರ್ ಮಾತ್ರೆಯ ಉತ್ಪಾದನೆ ಹೆಚ್ಚಾಗಿದ್ದು, ರಾಜ್ಯಕ್ಕಾಗಿ ಒಂದು ಲಕ್ಷ ಮಾತ್ರೆ ಖರೀದಿಸಿದ್ದೇವೆ. ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗಲಿವೆ' ಎಂದು
ತಿಳಿಸಿದರು.
ನಾರಾಯಣ ಹೆಲ್ತ್ ಸಂಸ್ಥೆಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ,' ಕೇಂದ್ರ ಸರ್ಕಾರದ ಆರೋಗ್ಯ ನೀತಿಗಳಿಂದ ಸಾಮಾನ್ಯ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿವೆ. ಮುಂದಿನ ಐದು ವರ್ಷದಲ್ಲಿ ಆರೋಗ್ಯ ಕ್ರಾಂತಿಯನ್ನು ದೇಶದಲ್ಲಿ ಕಾಣಬಹುದು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.