ADVERTISEMENT

ಅಲ್ಪಸಂಖ್ಯಾತರ ಸ್ಥಾನಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:37 IST
Last Updated 19 ಡಿಸೆಂಬರ್ 2012, 9:37 IST

ಜಮಖಂಡಿ: ಜೈನ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಬೇಕು ಮತ್ತು ಜೈನ ಧರ್ಮವನ್ನು ಹಿಂದುಳಿದ `ಎ' ವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಜೈನ ಧರ್ಮದ ಸಮಾಜ ಬಾಂಧವರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಲ್ಲಿನ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಜೈನ ಸಮಾಜ ಬಾಂಧವರು ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಸಿ ಕಚೇರಿ ಆವರಣಕ್ಕೆ ಬಂದರು. ಅಲ್ಲಿ ಪ್ರತಿಭಟನಾ ಸಭೆ ನಡೆಯಿತು.

1871 ರಿಂದ 2011 ರ ವರೆಗೆ ನಡೆದ ಭಾರತ ದೇಶದ ಜನಗಣತಿ ಯಲ್ಲಿ ಜೈನ ಧರ್ಮವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಲಾಗಿದ್ದು, ಅಲ್ಪಸಂ.ಖ್ಯಾತ ಧರ್ಮದ ಸ್ಥಾನಮಾನಕ್ಕೆ ಅರ್ಹವಾಗಿದೆ.

ವಿಶ್ವ ಜೈನ ಸಂಘಟನೆ 2008 ರಲ್ಲಿ ಹೈಕೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯ ಮೇರೆಗೆ ಕೇಂದ್ರ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿ ಮನವಿಯನ್ನು ಪರಿಶೀಲಿಸಲು ಆದೇಶಿಸಿತ್ತು. ಜೈನ ಧಾರ್ಮಿಕ ಸ್ಥಳ, ಸಂಸ್ಥೆಗಳು, ಮಂದಿರಗಳು, ತೀರ್ಥ ಕ್ಷೇತ್ರಗಳಿಗೆ ಸೂಕ್ತ ಕಾನೂನು ರಕ್ಷಣೆ ನೀಡಲು ಸೂಚಿಸಿತ್ತು ಎಂದು ಪ್ರತಿಭಟನಾಕಾರರು ವಿವರಿಸಿದರು.

ಅಲ್ಪಸಂಖ್ಯಾತ ಆಯೋಗದ 1992 ರ ಅಧಿನಿಯಮ 2(ಸಿ) ಗೆ ಅನುಸಾರವಾಗಿ ನಡೆದ ಜನಗಣತಿ ಪ್ರಕಾರ 5 ಧರ್ಮಗಳಿಗೆ ನೀಡಿದ ಅಲ್ಪ ಸಂಖ್ಯಾತ ಧರ್ಮದ ಸ್ಥಾನಮಾನದನ್ವಯ ಜೈನ ಧರ್ಮ ಕೂಡ ಅರ್ಹವಾಗಿದೆ ಎಂದು ಪ್ರತಿಪಾದಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸುಶೀಲಕುಮಾರ ಬೆಳಗಲಿ ಮಾತನಾಡಿದರು. ಪ್ರತಿಭಟನೆಯ ಕೊನೆಯಲ್ಲಿ ಎಸಿ ಕಚೇರಿಯ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ದೇವಲ ದೇಸಾಯಿ, ಪಿ.ಟಿ.ಪಾಟೀಲ, ಎಂ.ಎ.ಸದಲಗಿ, ಶಾಂತು ಖಿದ್ರಾಪೂರ, ಜಯಪ್ರಕಾಶ ನಾಂದ್ರೇಕರ, ಮಹಾವೀರ ಪಾಟೀಲ, ರಾಮಣ್ಣ ಮುತ್ತೂರ, ಅಣ್ಣಪ್ಪ ಶಿರಹಟ್ಟಿ, ಪಂಡಿತ ಬಾಹುಬಲಿ ಉಪಾಧ್ಯೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.