ADVERTISEMENT

`ಆಸೆರಹಿತ ಬಾಳಿನ ಹಾದಿ ತೋರಿದ ರಾಯರು'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:08 IST
Last Updated 3 ಏಪ್ರಿಲ್ 2013, 9:08 IST

ಹುನಗುಂದ: ಇಂದಿನ ಆಧುನಿಕ ಸಮಾಜ ಆಸೆಗಳ ಬೆನ್ನು ಹತ್ತಿ ಸೌಖ್ಯವನ್ನು ಮರೆಯುತ್ತಿದೆ. ಆಸೆ ಮತ್ತು ಚಿಂತೆ ರಹಿತ ಬದುಕಿನ ಹಾದಿ ತೋರಿದ ರಾಘವೇಂದ್ರ ಗುರುಗಳ ಭಕ್ತಿ ಮಾರ್ಗವನ್ನು ಅನುಸರಿಸಿ ಎಂದು ಮಂತ್ರಾಲಯದ ಪಂಡಿತ ಎನ್. ವಾದಿರಾಜಾಚಾರ್ಯ ಹೇಳಿದರು.

ಅವರು ಇಲ್ಲಿನ ಬ್ರಾಹ್ಮಣ ಸಮಾಜ ರಾಘವೇಂದ್ರ ಗುರುಸಾರ್ವಭೌಮರ ಮೃತ್ತಿಕಾ ಶಿಲಾ ವೃಂದಾವನ ಪ್ರತಿಷ್ಠಾಪನೆ ನಿಮಿತ್ತ ಸೋಮವಾರ ನಗರದಲ್ಲಿ ಹಮ್ಮಿಕೊಂಡ ಲಕ್ಷ ದೀಪೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಪಂ.ಬ್ರಹ್ಮಣ್ಯತೀರ್ಥ ಆಚಾರ್ಯರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿದ್ದರು.  ಕೃಷ್ಣಾಚಾರ್ಯರು ಸುಯತೀಂದ್ರ ಶ್ರೀಗಳಿಗೆ ಸಲ್ಲಿಸಿದ ಬಿನ್ನವತ್ತಳೆಯನ್ನು ಸ್ವೀಕರಿಸಿದರು.

ಇಳಕಲ್ಲ ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ, ಬಿಜೆಪಿ ಮುಖಂಡ ಧನಂಜಯ ಸರದೇಸಾಯಿ, ಮಂತ್ರಾಲಯ ಪಾದಯಾತ್ರೆ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ದೇಸಾಯಿ, ದಾನಿಗಳಾದ ರಾಮಣ್ಣ ಕುಲಕರ್ಣಿ, ನೂರಂದಪ್ಪ ಉಪ್ಪಿನ, ರವಿ ಹುಚನೂರ, ಮೆಹಬೂಬಅಲಿ ಮುಲ್ಲಾ, ರಾಜಕುಮಾರ ಬಾದವಾಡಗಿ, ಮಹ್ಮದ ದೋಟಿಹಾಳ, ಮಲ್ಲು ವೀರಾಪುರ, ಸುರೇಶ ಹಳಪೇಟಿ, ಮನೋಹರ ವಾಲ್ಮೀಕಿ, ಶೇಖರಪ್ಪ ಬಾದವಾಡಗಿ ಇವರನ್ನು ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಭೀ.ಗು.ದೇಶಪಾಂಡೆ ಅವರ `ಗಾಯತ್ರಿ ಚಾಲಿಸಾ ದೋಹಾ' ಪುಸ್ತಕ ಮತ್ತು ಸಮಾಜದ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು.
ವಾದಿರಾಜ ದೇಶಪಾಂಡೆ ಸ್ವಾಗತಿಸಿ ದರು. ಸಮಾಜ ಅಧ್ಯಕ್ಷ ಮುರಲೀಧರ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಯೂರ ಪಾಠಕ ಪ್ರಾರ್ಥನೆ ಗೀತೆ ಹಾಡಿದರು. ಹನಮಂತ ಕುಲಕರ್ಣಿ, ಗುಂಡಣ್ಣ ದೇಶಪಾಂಡೆ, ಸುಧೀಂದ್ರ ಜೋಶಿ ನಿರೂಪಿಸಿದರು. ಜೀವನ ಪಾಠಕ ವಂದಿಸಿದರು. ಲಕ್ಷ ದೀಪೋತ್ಸವದಲ್ಲಿ ತಾಲ್ಲೂಕಿನ ಸರ್ವ ಸಮಾಜದ ಜನರು ಭಕ್ತಿಯಿಂದ ಭಾಗವಹಿಸಿ ದೀಪ ಬೆಳಗಿಸಿದರು. ನಂತರ ಮೈಸೂರಿನ ಪ್ರಸಿದ್ಧ ಗಾಯಕ ರಾಮಾಚಂದ್ರಾಚಾರ್ಯ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.