ಬಾಗಲಕೋಟೆ: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್ಎಎಸ್) ಪದಾಧಿಕಾರಿಗಳು ಜಿಲ್ಲಾ ಸಚಿವ ಗೋವಿಂದ ಕಾರಜೋಳ ಅವರಿಗೆ ಘೇರಾವ್ ಹಾಕಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ಹೊರಬಂದ ಸಚಿವರಿಗೆ ಘೇರಾವ್ ಹಾಕಿದ ಎಂಆರ್ಎಚ್ಎಸ್ ಪದಾಧಿಕಾರಿಗಳು, ಮುಂಬರುವ ಆಯೋಗದ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದರು.
ಸಚಿವರಾದ ರೇವು ನಾಯಕ ಬೆಳಮಗಿ, ಅರವಿಂದ ಲಿಂಬಾವಳಿ, ಸುನೀಲ ವಲ್ಯಾಪುರೆ ಅವರು ಆಯೋಗದ ವರದಿ ವಿರೋಧಿಸಿರುವುದು ಖಂಡನೀಯ. ಸಚಿವರು ಸರ್ಕಾರದ ಭಾಗವಾಗಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಆದರೆ ಒಂದು ಸಮುದಾಯದ ಪರ ನಿಲ್ಲುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದು, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಂಆರ್ಎಚ್ಎಸ್ನ ಪರಶುರಾಮ ಮರೇಗುದ್ದು, ಸರಾಜ ದೊಡ್ಡಮನಿ, ಸಂತೋಷ ನಾಟಿಕಾರ, ಶಾಂತು ಗೋರಬಾಳ, ಸಿದ್ದು ಸತ್ಯನ್ನವರ, ಪುಂಡಲೀಕ ಗಸ್ತಿ, ಚಂದು ಐಹೊಳೆ, ಪೀರಪ್ಪ ಮ್ಯಾಗೇರಿ, ದುರುಗಪ್ಪ ಸೂಳಿಬಾವಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.