ಹುನಗುಂದ: ರಾಜ್ಯದಲ್ಲಿನ ಶಿಕ್ಷಕ ಸಂಘಟನೆಗಳು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಬೇಕು. ನ್ಯಾಯಯುತ ಬೇಡಿಕೆಗಳಿದ್ದಲ್ಲಿ ತಾನು ಸರ್ಕಾರಕ್ಕೆ ಮನವಿ ಮಾಡುವೆ. ಸಕಾರಾತ್ಮಕವಾದ ಚಿಂತನೆ ಸಂಘಟನೆಗಳಿಂದ ನಡೆಯಲಿ ಎಂದು ಮೇಲ್ಮನೆ ಸದಸ್ಯ ಅರುಣ ಶಹಾಪುರ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡ ಶಿಕ್ಷಕರು ಹಾಗೂ ಉಪನ್ಯಾಸಕರ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವೇತನ ತಾರತಮ್ಯ ಹಾಗೂ ಉನ್ನತ ಪದವಿ ಪಡೆದವರ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಕೊಳ್ಳುವ ಭರವಸೆ ನೀಡಿದರು.
ಪ್ರಭಾರ ಪ್ರಾಚಾರ್ಯ ಎಂ.ಬಿ.ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಎನ್.ಪಿ.ನಿಲುಗಲ್ಲ ಹಾಗೂ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಎಂ.ಬಿ.ಗಂಜಿಹಾಳ ಉಪಸ್ಥಿತರಿದ್ದರು. 200 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಉಪನ್ಯಾಸಕರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅರುಣ ಶಹಾಪುರರನ್ನು ಸತ್ಕರಿಸಲಾಯಿತು.
ಪರಿಸರ ಸಂರಕ್ಷಣೆ ಜಾಗೃತಿ ಅಗತ್ಯ: ಹುನಗುಂದ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಗರದಲ್ಲಿ ಮನೆಗೊಂದು ವನ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ನಡೆಯಿತು. ಹಿರಿಯ ದಿವಾಣಿ ನ್ಯಾಯಾಧೀಶರಾದ ಕಾವೇರಿ ಕಲ್ಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಡು ಉಳಿಸಿ ಬೆಳೆಸುವ ಹೊಣೆ ಎಲ್ಲರದು. ಅನುಮತಿಯಲ್ಲದೇ ಮರ ಕಡಿಯುವುದು ಅಪರಾಧ. ಈ ಬಗ್ಗೆ ಸೂಕ್ತ ಎಚ್ಚರ ಅಗತ್ಯ ಎಂದರು.
ನ್ಯಾಯಾಧೀಶ ಶರಣಪ್ಪ ಸಜ್ಜನ ಮಾತನಾಡಿ, ಸಸಿ ನಡೆುವ ಕುರಿತು ಎಲ್ಲರೂ ಸಂಕಲ್ಪ ಮಾಡಬೇಕು. ಅಂದಾಗ ಪರಿಸರ ಕಾಳಜಿ ಬೆಳೆಯುತ್ತದೆ ಎಂದರು. ಪ್ರಭಾರ ಪ್ರಾಚಾರ್ಯ ಎಂ.ಎಚ್.ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಕೀಲ ಕೆ.ಎಂ.ಸಾರಂಗಮಠ ಮತ್ತು ಎಂ.ಬಿ.ದೇಶಪಾಂಡೆ ಪರಿಸರ ರಕ್ಷಣೆ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಟಿ.ಜ್ಞಾನಪ್ರಕಾಶ, ಎನ್.ಜೆ.ರಾಮವಾಡಗಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.