ADVERTISEMENT

ಕಲಿತವರಿಂದಲೇ ಭ್ರಷ್ಟಾಚಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 10:00 IST
Last Updated 13 ಮಾರ್ಚ್ 2012, 10:00 IST

ಮುಧೋಳ:  ತ್ಯಾಗ ಮತ್ತು ಸೇವೆ ಭಾರತದ ಜೀವನಾದರ್ಶಗಳಾಗಿದ್ದು, ವಿದೇಶಿಯರು ತ್ಯಾಗದ ಹಾಗೂ ಸೇವೆಯ ಹೆಸರಿನಲ್ಲಿ ತಮ್ಮ ಧರ್ಮಕ್ಕೆ ಮತಾಂತರಗೊಳಿಸುವ ಸ್ವಾರ್ಥ ಇಟ್ಟುಕೊಂಡಿರುತ್ತಾರೆ. ಆದರೆ ಬಾಬಾ ಆಮ್ಟೆ ಅದ್ಯಾವುದೇ ವಿಚಾರ ಇಟ್ಟುಕೊಳ್ಳದೆ ನಿಸ್ವಾರ್ಥ ಸೇವೆ ಮಾಡಿದರು, ಅಂಥ ಲಕ್ಷಾಂತರ ಉದಾಹರಣೆಗಳು ಭಾರತೀಯರಲ್ಲಿವೆ ಆರ್.ಎಸ್.ಎಸ್. ಉತ್ತರ ಪ್ರಾಂತ ಪ್ರಚಾರಕ ಗೋಪಾಲಜಿ ಹೇಳಿದರು.

ನಗರದ ಸೇವಾ ಭಾರತಿ ಸಂಸ್ಥೆಯ ವಿಶೇಷ ಅಗತ್ಯವುಳ್ಳ ಅರುಣ ಚೇತನ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಿಯರು ಅನಾಥ ಮಕ್ಕಳಿಗಾಗಿ ಮಾಡುವಷ್ಟು ಸೇವೆಯನ್ನು ಭಾರತದ ಸಿದ್ಧಗಂಗಾ ಮಠವೊಂದೇ ಮಾಡುತ್ತಿದೆ, ಅಲ್ಲಿ ಎಂದೂ ಮತ, ಪಂಥದ ಗಾಳಿಯೂ ಸುಳಿಯುವುದಿಲ್ಲ, ಭಾರತದಲ್ಲಿ ಭ್ರಷ್ಟಾಚಾರ ಅನಕ್ಷರಸ್ಥರಿಂದ ನಡೆದಿಲ್ಲ, ಹೆಚ್ಚು ಕಲಿತವರಿಂದ ನಡೆದಿದೆ.
 
ಅಂಥ ಎಲ್ಲ ಸಮಾಜ ವಿರೋಧಿ ಕೆಲಸಗಳನ್ನು ಬಿಟ್ಟು, ವಾರದಲ್ಲಿ ಕನಿಷ್ಠ ಒಂದು ದಿನವಾದರು ಇಂಥ ಆಶ್ರಮಗಳಿಗೆ, ಅನಾಥ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ, ಅವರೊಂದಿಗೆ ನಿಮ್ಮ ಮಕ್ಕಳನ್ನು ಆಟವಾಡಲು ಕರೆತನ್ನಿ, ನಿಮ್ಮ ಮಕ್ಕಳ ಹುಟ್ಟುಹಬ್ಬ ದಂದು ಅನಾಥ ಮಕ್ಕಳಿಗೆ ಬಟ್ಟೆ, ತಿಂಡಿ ಕೊಡುವ ಸಂಪ್ರದಾಯವನ್ನು ಬೆಳೆಸಿ ಎಂದರು.

ಮುಖ್ಯ ಅತಿಥಿಗಳಾಗಿದ್ದ ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ವ್ಯವಸ್ಥೆಯಲ್ಲಿ ಜೀವಿಸುವ ನಾವೆಲ್ಲ ಸಮಾಜದ ಒಂದು ಘಟಕವಾಗಿದ್ದೇವೆ. ಸೇವೆಯ ಮೂಲಕ ಸಮಾಜದ ಋಣ ತೀರಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಅರುಣ ಚೇತನ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸರ್ಕಾರದ ಒಂದಿಷ್ಟೂ ಸಹಾಯವಿಲ್ಲದೆ ನಡೆಸುತ್ತಿ ರುವ ಅಂಗವಿಕಲರ ಶಾಲೆ, ಮಾಲಾಪುರ ರಸ್ತೆಪಕ್ಕದ ಗೋಶಾಲೆ ಹೀಗೆ ಹಲವಾರು ಸಂಸ್ಥೆಗಳು ಸಮಾಜಮುಖಿ ಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಡಾ. ಜೋತ್ಸ್ನಾ ಸಮಾಜ ಪ್ರಾಸ್ತಾವಿಕ ಮಾತನಾಡಿ, ವರ್ಷಕ್ಕೆ ಒಂದು ಮಗುವಿನ ವೆಚ್ಚ ರೂ 25 ಸಾವಿರವಿದ್ದು, ಸಮಾಜದಲ್ಲಿ ಅನುಕೂಲಸ್ಥರು ಇಂಥ ಒಂದು ಮಗುವಿನ ಖರ್ಚು ನೋಡಿಕೊಳ್ಳುವುದರೊಂದಿಗೆ ಸೇವೆಯನ್ನು ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘ ಚಾಲಕ ಸತೀಶ ಕೊಲ್ಹಾರ ವಹಿಸಿದ್ದರು. ಪುರಸಭೆ ಅಧ್ಯಕ್ಷ ರಾಜು ಪಾಲೋಜಿ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಪೋತದಾರ ಸ್ವಾಗತಿಸಿದರು, ಕುಶಾಲಗೌಡ ಪಾಟೀಲ ಸಂಸ್ಥೆಯ ವರದಿ ವಾಚಿಸಿದರು, ಮೋಹನ ರೇಸಪೂಡ ಪರಿಚಯಿಸಿದರು, ಡಾ. ಪ್ರಾಚೀ ರೇಸಪೂಡ ನಿರೂಪಿಸಿದರು, ವಕೀಲ ರಾಮಕೃಷ್ಣ ಬುದ್ನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.