ADVERTISEMENT

ಕಸಾಪ ಏಷ್ಯಾದಲ್ಲಿಯೇ ದೊಡ್ಡ ಪ್ರಾತಿನಿಧಕ ಸಂಸ್ಥೆ: ಸಾಹಿತಿ ಹಳ್ಳೂರ

​ಪ್ರಜಾವಾಣಿ ವಾರ್ತೆ
Published 5 ಮೇ 2019, 15:08 IST
Last Updated 5 ಮೇ 2019, 15:08 IST
ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಹಿರಿಯ ಸಾಹಿತಿ ಎಸ್.ಎಸ್.ಹಳ್ಳೂರ ಮಾತನಾಡಿದರು. 
ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಹಿರಿಯ ಸಾಹಿತಿ ಎಸ್.ಎಸ್.ಹಳ್ಳೂರ ಮಾತನಾಡಿದರು.    

ಬಾಗಲಕೋಟೆ: ‘ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್‌ ನಿರಂತರ ಹೋರಾಟ ಮಾಡುತ್ತ ಬಂದಿದೆ. ಮೂರು ಲಕ್ಷಕ್ಕಿಂತ ಹೆಚ್ಚಿನ ಸದಸ್ಯರನ್ನೊಳಗೊಂಡ ಸಂಸ್ಥೆ ಇಡೀ ಏಷ್ಯಾದಲ್ಲಿ ದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿದೆ’ ಎಂದು ಹಿರಿಯ ಸಾಹಿತಿ ಎಸ್.ಎಸ್.ಹಳ್ಳೂರ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ‘84 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡುವುದರ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ’ ಎಂದರು.

ಸಾಹಿತಿ ಎಚ್.ಎಂ.ಜುಟ್ಟಲ ಮಾತನಾಡಿ, ‘ಕನ್ನಡ ಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದು. ಕನ್ನಡ ಲಿಪಿಯು ಬಹಳಷ್ಟು ವಿಶಿಷ್ಟತೆ ಹೊಂದಿರುವ ಭಾಷೆಯಾಗಿದೆ’ ಎಂದರು.

ADVERTISEMENT

ಮತ್ತೊರ್ವ ಸಾಹಿತಿಆರ್.ಎಂ.ಕಟ್ಟಿಮನಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್‌ ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗುರುಸ್ವಾಮಿ ಗಣಾಚಾರಿಯವರು ಮಾತನಾಡಿ, ‘ನಿರಂತರ ಅಧ್ಯಯನ ಶೀಲತೆಯಿಂದ ಉತ್ತಮವಾದ ಕಾವ್ಯ ಹೊರಬರುತ್ತದೆ. ಹೃದಯದಿಂದ ಬಂದ ಕಾವ್ಯ ಮಾತ್ರ ಮತ್ತೊಬ್ಬರ ಹೃದಯ ಪ್ರವೇಶಿಸುತ್ತದೆ’ ಎಂದರು.

ಈ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿಎಸ್.ಆರ್‌.ಪಟ್ಟಣಶೆಟ್ಟಿ, ಪರಿಷತ್‌ನ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಕೆ.ತಳವಾರ, ಡಾ. ಜಿ.ಐ.ನಂದಿಕೋಲಮಠ, ವೀರಣ್ಣ ಅಥಣಿ,ಮಹಾಂತೇಶ ಕರಬಾಶೆಟ್ಟಿ, ಪ್ರೊ. ಸರೋಜನಿ ಹೊಸಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕನ್ನಡದ ಕಾರ್ಯಕ್ರಮದಲ್ಲಿ ಕವಿ, ಸಾಹಿತಿಗಳ ಕೊರತೆ

ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಬೆರಳಣಿಕೆಯಷ್ಟೇ ಸಾಹಿತ್ಯಾಸಕ್ತರಿದ್ದು. ಏಷ್ಯಾದಲ್ಲಿ ದೊಡ್ಡ ಸಂಸ್ಥೆ ಎಂಬ ಕೀರ್ತಿ ಹೊಂದಿದ ಸಂಸ್ಥೆಯ ಸಂಸ್ಥಾಪನ ದಿನಾಚರಣೆಯಲ್ಲಿ ಸಾಹಿತಿಗಳು ಪಾಲ್ಗೊಳ್ಳದಿರುವುದು ಸಂಘಟಕರನ್ನು ಮುಜುಗರಕ್ಕೀಡು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.