ADVERTISEMENT

ಕೃಷ್ಣಾ ನದಿಯಲ್ಲಿ ನೀರು ಇಳಿಮುಖ

ನೀರನ್ನು ಮಿತವಾಗಿ ಬಳಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 5:37 IST
Last Updated 16 ಏಪ್ರಿಲ್ 2018, 5:37 IST
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿಯ ನೀರು ಇಳಿಮುಖವಾಗುತ್ತಿದ್ದು ಮಹಿಷವಾಡಗಿ ಸೇತುವೆ ಸಂಪೂರ್ಣವಾಗಿ ತೆರವಾಗಿದ್ದು, ಅಥಣಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜನರು ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಿದ್ದಾರೆ
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿಯ ನೀರು ಇಳಿಮುಖವಾಗುತ್ತಿದ್ದು ಮಹಿಷವಾಡಗಿ ಸೇತುವೆ ಸಂಪೂರ್ಣವಾಗಿ ತೆರವಾಗಿದ್ದು, ಅಥಣಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜನರು ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಿದ್ದಾರೆ   

ರಬಕವಿ ಬನಹಟ್ಟಿ : ಬಾಗಲಕೋಟೆ, ವಿಜಯಪುರ ಮತ್ತು ಬೆಳಗವಾಗಿ ನೂರಾರು ನಗರ ಮತ್ತು ಗ್ರಾಮೀಣ ಪ್ರದೇಶಗಳ ನೀರಿನ ಮೂಲವಾಗಿದ್ದ ಕೃಷ್ಣಾ ನದಿಯ ನೀರು ಕ್ರಮೇಣ ಇಳಿಮುಖವಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನೀರಿನ ಸಾಕಷ್ಟು ಅಭಾವವಾಗುವ ಸಾಧ್ಯತೆ ಇದೆ.

ರಬಕವಿ- ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಿಸಲಾದ ಮಹಿಷವಾಡಗಿ ಬ್ಯಾರೇಜ್ ಕೆಲವು ದಿನಗಳಿಂದ ಕಾಣುತ್ತಿದ್ದು, ಅಲ್ಲದೇ ನೀರಿನ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ.

ಈಗಾಗಲೇ ಈ ಭಾಗದಲ್ಲಿ ಬಿಸಿಲಿನ ತಾಪ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅದೇ ರೀತಿಯಾಗಿ ಕೃಷ್ಣಾ ನದಿಯಲ್ಲಿಯ ನೀರಿನ ಪ್ರಮಾಣ ದಿಢೀರ್‌ ಕಡಿಮೆಯಾಗುತ್ತಿದೆ. ಇದೇ ರೀತಿಯಾಗಿ ಮುಂದುವರಿದರೆ ಮೇ ಮೊದಲನೆ ವಾರದಲ್ಲಿಯೇ ಕೃಷ್ಣಾ ನದಿ ಸಂಪೂರ್ಣ ಬರಿದಾಗಲಿದೆ.

ADVERTISEMENT

ಕೃಷ್ಣಾ ನದಿ ನೀರು ಮೇ 15ರವರೆಗೆ ಬರಬಹುದು. ಆದರೂ ಮುಂಜಾಗೃತ ಕ್ರಮವಾಗಿ ನಗರಸಭೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕು. ಕೃಷ್ಣಾ ನದಿಯಲ್ಲಿ ನೀರು ನಿಂತ ನೀರಾಗಿರುವುದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ನೀರನ್ನು ಕುದಿಸಿ ಆರಿಸಿ ಕುಡಿಯಲು ಪೌರಾಯುಕ್ತ ಆರ್‌.ಎಂ.ಕೊಡುಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದು ಕಡೆ ವಿಧಾನ ಸಭೆಯ ಚುನಾವಣೆಯ ಕಾವು ಏರುತ್ತಿದ್ದರೆ ಮತ್ತೊಂದೆಡೆಗೆ ನೀರಿನ ತೀವ್ರ ಅಭಾವ ಚುನಾವಣೆಯ ಸಂದರ್ಭದಲ್ಲಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಮತ್ತೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದತ್ತ ರಾಜ್ಯದ ಜನತೆ ಮುಖ ಮಾಡುವಂತಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಬೇಕಿದೆ. ಆದರೆ ಸದ್ಯ ಜನಪ್ರತಿನಿಧಿಗಳು ತಮ್ಮ ಟಿಕೆಟ್‌ಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಇದು ಎಂದು ಆರಂಭವಾಗುತ್ತದೆ ಮತ್ತು ಈ ಭಾಗದ ಜನ ಮತ್ತು ಜಾನುವಾರಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬಹಳಷ್ಟು ಗಂಭೀರವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.