ADVERTISEMENT

ಗ್ರಾಹಕರ ವೇದಿಕೆ ಆದೇಶ ಪಾಲಿಸದವರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:14 IST
Last Updated 3 ಅಕ್ಟೋಬರ್ 2017, 5:14 IST

ಜಮಖಂಡಿ: ಗ್ರಾಹಕರ ವೇದಿಕೆಯ ಆದೇಶ ಪಾಲಿಸದ ತಾಲ್ಲೂಕಿನ ಹೊಸೂರ ಗ್ರಾಮದ ವಿಜಯಲಕ್ಷ್ಮಿ ಅರ್ಬನ್‌ ಕೋ–ಆಪ್‌ ಸೊಸೈಟಿ ನಿಯಮಿತದ ಕಾರ್ಯದರ್ಶಿ ಹಾಗೂ ಚೇರಮನ್‌ ಅವರಿಗೆ 6 ತಿಂಗಳು ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ ಎಂದು ವಕೀಲ ವಿ.ಬಿ. ತಿರಕಪಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೊಸೈಟಿ ಕಾರ್ಯದರ್ಶಿ ಹನಮಂತ ಹಳ್ಳೂರ ಹಾಗೂ ಚೇರಮನ್‌ ಗಿರಿಮಲ್ಲಪ್ಪ ಬಾಗೇವಾಡಿ ಶಿಕ್ಷೆ ಮತ್ತು ದಂಡಕ್ಕೆ ಗುರಿಯಾದವರು. ತಮ್ಮ ಕಕ್ಷಿದಾರರಾದ ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿಗಳಾದ ಸತ್ಯೆಪ್ಪ ಬಡೆಪ್ಪಗೋಳ ಹಾಗೂ ಆತನ ಪತ್ನಿ ಲಕ್ಷ್ಮಿ ಬಡೆಪ್ಪಗೋಳ ಪರವಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ ಎಂದರು.

ತಮ್ಮ ಕಕ್ಷಿದಾರರು ಸೊಸೈಟಿನಲ್ಲಿ 2010 ರಲ್ಲಿ ₨3 ಲಕ್ಷ ಹಣ ಠೇವಣಿ ಇಟ್ಟಿದ್ದರು. ಇಟ್ಟ ಠೇವಣಿ ಹಾಗೂ ಅದರ ಮೇಲಿನ ಬಡ್ಡಿ ಹಣವನ್ನು ಪಾವತಿಸುವಂತೆ ಹಲವಾರು ಬಾರಿ ಕೋರಿದ್ದರು. ಆದರೆ, ಸೊಸೈಟಿಯಿಂದ ಯಾವುದೇ ಸ್ಪಂದನೆ ಇರಲಿಲ್ಲ.

ADVERTISEMENT

ಆದ್ದರಿಂದ ಹಣ ಪಾವತಿಸುವಂತೆ ಆದೇಶ ನೀಡಲು ಕೋರಿ ಗ್ರಾಹಕರ ವೇದಿಕೆಗೆ 2013 ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿ ಠೇವಣಿ ಹಣದ ಮೇಲೆ ಕಕ್ಷಿದಾರರು ಪಡೆದ ಸಾಲ ಮತ್ತು ಬಡ್ಡಿ ಹಣ ಮುರಿದುಕೊಂಡು ಉಳಿದ ಹಣವನ್ನು ಪಾವತಿಸುವಂತೆ 2014 ರ ಮೇ 24 ರಂದು ಗ್ರಾಹಕರ ವೇದಿಕೆ ತೀರ್ಪು ನೀಡಿತ್ತು.

ಆದರೆ, ಗ್ರಾಹಕರ ವೇದಿಕೆ ನೀಡಿದ್ದ ತೀರ್ಪನ್ನು ಸೊಸೈಟಿ ಪಾಲಿಸಿರಲಿಲ್ಲ. ವೇದಿಕೆಯ ತೀರ್ಪನ್ನು ಪಾಲಿಸುವಂತೆ ಕೋರಿ ಮತ್ತೆ 2014 ರಲ್ಲಿ ಮರು ಅರ್ಜಿ ಸಲ್ಲಿಸಲಾಗಿತ್ತು. ಮರು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.