ADVERTISEMENT

ಜನರ ಋಣ ತೀರಿಸುವೆ: ಮುರುಗೇಶ

ಜನಸಂಪರ್ಕ ಸಭೆ: ಲಡ್ಡುಮುತ್ಯಾ ದೇವಸ್ಥಾನದ ಸಭಾಭವನಕ್ಕೆ ₹ 10 ಲಕ್ಷ ಅನುದಾನದ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 9:58 IST
Last Updated 6 ಜೂನ್ 2018, 9:58 IST

ಬಾಗಲಕೋಟೆ: ‘ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿರುವ ಕ್ಷೇತ್ರದ ಜನತೆಗೆ ಕೃತಜ್ಞನಾಗಿದ್ದು, ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಿಮ್ಮ ಋಣ ತೀರಿಸುವೆ’ ಎಂದು ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಹೇಳಿದರು.

ಸಮೀಪದ ಗದ್ದನಕೇರಿ ಬಳಿಯ ಲಡ್ಡುಮುತ್ಯಾ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಹಾಗೂ ಮುರನಾಳ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಜನತೆ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಸರ್ಕಾರದ ಮನೆ ಬಾಗಿಲಿಗೆ ಹೋಗದೆ, ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ನಿವಾರಿಸುವುದೇ ಜನ ಸಂಪರ್ಕ ಸಭೆಯಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ನಮ್ಮ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದಾಗ ಅವರ ಮನಸಿಗೆ ನೋವಾಗದಂತೆ ಅಧಿಕಾರಿಗಳು ನಡೆದುಕೊಂಡು ಅವುಗಳನ್ನು ಶೀಘ್ರ ಬಗೆಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಲಡ್ಡುಮುತ್ಯಾ ದೇವಸ್ಥಾನದ ಸಭಾಂಗಣ ಮತ್ತು ಕಂಪೌಂಡ್ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹ 10ಲಕ್ಷ ನೀಡಲಾಗುವುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಠೋಡ, ಶ್ರೀಶೈಲ ಗೌರಿ, ಸಂಗಪ್ಪ ಕಟಗೇರಿ, ಎಚ್.ಎನ್.ಅಮರಗಟ್ಟಿ, ಹೊಳಿಯಪ್ಪ ಜಕ್ಕನ್ನವರ, ಡಾ.ಮಲ್ಲಿಕಾರ್ಜುನ್, ಮಳೆಯಪ್ಪ ಗೌಡರ, ಫಕೀರಪ್ಪ ಚಿಂಚಲಿ, ನಿಂಗಪ್ಪ ಕ್ಯಾದಗಿ, ಮಹಾದೇವಪ್ಪ ತಳವಾರ, ವೀರಭದ್ರಪ್ಪ ನಾಯಕ ಸೇರಿದಂತೆ ಮತ್ತಿತರರು ಇದ್ದರು.

ಕುಂದು ಕೊರತೆ ಆಲಿಕೆ:
ಬೀಳಗಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಶಾಲಾ–ಕಾಲೇಜು ನಿರ್ಮಾಣ, ಮುಳುಗಡೆ ಸಂತ್ರಸ್ತರ ಸಮಸ್ಯೆ, ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ, ಸ್ಮಶಾನಕ್ಕೆ ಜಾಗೆ ನೀಡುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಶಾಸಕರ ಎದುರು ಬಿಚ್ಚಿಟ್ಟರು. ಎಲ್ಲವನ್ನು ಆಲಿಸಿದ ನಿರಾಣಿ, ಶೀಘ್ರ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.