ADVERTISEMENT

ಜಮೀನು ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2014, 6:06 IST
Last Updated 8 ಫೆಬ್ರುವರಿ 2014, 6:06 IST
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಧರಣಿ ನಡೆಸಿದ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಕುಟುಂಬ.
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಧರಣಿ ನಡೆಸಿದ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಕುಟುಂಬ.   

ಬಾಗಲಕೋಟೆ: ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ಸರ್ಕಾರ ದಲಿತರಿಗೆ ಮಂಜೂರು ಮಾಡಿರುವ ಜಮೀನನ್ನು ಅತಿಕ್ರಮಿಸಿಕೊಂಡಿರುವವರನ್ನು ತೆರವು­ಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ದಲಿತ ಕುಟುಂಬದ ಸದಸ್ಯರು ನವನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಧರಣಿ ನಡೆಸಿದರು.

ಕುಳಲಿ ಗ್ರಾಮದ ದಲಿತ ಮಲ್ಲಿಕಾ­ರ್ಜುನ ಬಟಗಿ, ಅವರ ಪತ್ನಿ ಶಾಂತಮ್ಮ, ಮಕ್ಕಳಾದ ಶ್ವೇತಾ, ವಿಶ್ವನಾಥ, ಕಾವೇರಿ ಮತ್ತು ಚೆನ್ನಮ್ಮ ಉಪವಾಸ ಧರಣಿ­ಯಲ್ಲಿ ಪಾಲ್ಗೊಂಡಿದ್ದರು.

ಧರಣಿ ನಿರತ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಮೂಲತಃ ವಿಜಾಪುರ ಜಿಲ್ಲೆಯ ಸಾರವಾಡ ಗ್ರಾಮದವರಾದ ನಮಗೆ ಅಲ್ಲಿ 2007ರಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ ಕಾರಣ ಸರ್ಕಾರ ಪರಿಹಾರವಾಗಿ ಕುಳಲಿ ಗ್ರಾಮದ ಸರ್ವೇ ನಂ. 23/2ರಲ್ಲಿ 4.4 ಎಕರೆ ಜಮೀನನ್ನು ಪರಿಹಾರವಾಗಿ ನೀಡಿದೆ ಎಂದರು.

ಸರ್ಕಾರ ಮಂಜೂರು ಮಾಡಿರುವ ಜಮೀನಿನಲ್ಲಿ ಸುಮಾರು 1 ಎಕರೆಗಿಂತ ಅಧಿಕ ಜಮೀನನ್ನು ಗ್ರಾಮದ ಪ್ರಭಾವಿ ರಾಜಕಾರಣಿಯೊಬ್ಬರು ಅತಿಕ್ರಮಿಸಿ­ಕೊಂಡಿದ್ದು, ತೆರವು­ಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನ­ವಾಗಿಲ್ಲ ಎಂದು ದೂರಿದರು.

ಅತಿಕ್ರಮಣ ತೆರವುಗೊಳಿಸಿಕೊಡು­ವಂತೆ ಮುಧೋಳ ತಹಶೀಲ್ದಾರ್‌ ಮತ್ತು ಶಾಸಕ ಗೋವಿಂದ ಕಾರಜೋಳ ಅವರಿಗೆ ಹಲವಾರು ಭಾರಿ ಮನವಿ ಮಾಡಿದರೂ ಅವರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಜಮೀನನಲ್ಲಿ ವ್ಯವಸಾಯ ಮಾಡಲು ಅತಿಕ್ರಮಣ­ಕಾರರು ಬಿಡುತ್ತಿಲ್ಲ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕುಟುಂಬಕ್ಕೆ ಮಂಜೂರಾಗಿರುವ ಜಮೀನು ದಲಿತರಿಗೆ ಸೇರಿದೆ ಎಂಬ ಕಾರಣಕ್ಕೆ ಕುಳಲಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಬೆಳೆ ಸಾಲವನ್ನೂ ನೀಡುತ್ತಿಲ್ಲ, ಇಡೀ ಕುಟುಂಬ ಚಿತ್ರಹಿಂಸೆ ಅನುಭವಿಸು­ವಂತಾಗಿದೆ ಎಂದು ಹೇಳಿದರು.

ಜಮೀನು ಅತಿಕ್ರಮಣವನ್ನು ತಕ್ಷಣ ತೆರವುಗೊಳಿಸಿ ಸಣ್ಣ ನೀರಾವರಿ ಇಲಾಖೆಯಿಂದ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಬೇಕು, ಈ ಹಿಂದೆ ಸರ್ಕಾರ ಮಂಜೂರು ಮಾಡಿರುವಂತೆ ದಲಿತ ಕುಟುಂಬಕ್ಕೆ ಮುಧೋಳ ತಾಲ್ಲೂಕಿನ ಹಳೆಗುಡದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು, ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.