ADVERTISEMENT

`ಜಾತಿ ಬಿಟ್ಟು ಕಾಯಕ ಹಿಡಿಯಿರಿ'

ಅಣ್ಣನ ನೆಲದಲ್ಲಿ ಬಸವ ಸಂಚಾರ ಯಾತ್ರೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 7:59 IST
Last Updated 25 ಏಪ್ರಿಲ್ 2013, 7:59 IST

ಕೂಡಲಸಂಗಮ: ಇಂದು ಸಮಾಜದಲ್ಲಿ ಜನ ಕಾಯಕ ಬಿಟ್ಟು ಜಾತಿ ಹಿಡಿದ ಪರಿಣಾಮ ಸಮಾಜದಲ್ಲಿ ಸಮಸ್ಯೆಗಳು ಅಧಿಕವಾಗುತ್ತಿವೆ ಇದರ ನಿವಾರಣೆಗೆ ಎಲ್ಲರೂ ಜಾತಿ ಬಿಟ್ಟು ಕಾಯಕ ಹಿಡಿಯುವ ಕಾರ್ಯ ಮಾಡಬೇಕು ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಸಭಾ ಭವನದ ಬಸವ ವೇದಿಕೆಯಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ವತಿಯಿಂದ ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ಬಸವ ಸಂಚಾರ ಯಾತ್ರೆಯ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇಂದು ರಾಜಕಾರಣಿಗಳು ಶರಣರ ವಚನಗಳ ಅಧ್ಯಯನ ಮಾಡಿ ಕನಿಷ್ಠ 10 ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಸವಣ್ಣ ಕಂಡ ಕಲ್ಯಾಣ ರಾಜ್ಯ ನಿರ್ಮಾಣದ ಕನಸ್ಸು ನನಸಾಗುವುದು. ಬಸವ ಸಂಚಾರ ಯಾತ್ರೆಯ ಮೂಲ ಉದ್ದೇಶ ಮಕ್ಕಳಲ್ಲಿ ಬಸವ ಸಂದೇಶ ಬಿತ್ತರಿಸುವುದು.

ಒಂದು ವರ್ಷಗಳ ಕಾಲ ನಡೆದ ಈ ಯಾತ್ರೆಯ ಸಮಾರೋಪ ಸಮಾರಂಭ ಇಂದು ಕೂಡಲಸಂಗಮದಲ್ಲಿ ಸಮಾರೋಪಗೊಳ್ಳುವುದರ ಮೂಲಕ ಬಸವ ಸಂದೇಶ ಜಗತ್ತಿನ ಎಲ್ಲ ಕಡೆ ಬಿತ್ತರಿಸುವುದು. ಸಾಣೇಹಳ್ಳಿ ಶಿವಕುಮಾರ ಕಲಾ ತಂಡದವರಿಂದ ಶಿವ ದೇಶ ಸಂಚಾರ ಯಾತ್ರೆ ಹಮ್ಮಿಕೊಳ್ಳುತ್ತಿದೆ.

ಯಾತ್ರೆಯಲ್ಲಿ ಮಹಾಮನೆಯ, ಶರಣ ಸತಿ ಲಿಂಗಪತಿ, ಶೂನ್ಯ ಸಂಪಾದನೆ ಎಂಬ ನಾಟಕಗಳನ್ನು ಹಿಂದಿ ಭಾಷೆಯಲ್ಲಿ ಪ್ರದರ್ಶನ ಮಾಡುವುದು. ಜೊತೆಗೆ ವಚನ ನೃತ್ಯರೂಪಕ ಮಾಡಲಾಗುವುದು. ಈ ಯಾತ್ರೆ 3 ತಿಂಗಳ ಕಾಲ ದೇಶದ ಎಲ್ಲ ರಾಜ್ಯಗಳಲ್ಲಿ ಸಂಚರಿಸಿ ಬಸವ ಸಂದೇಶ ಬಿತ್ತರಿಸುವುದು. ಯಾತ್ರೆ ಮುಂದಿನ ತಿಂಗಳಿಂದ ಪ್ರಾರಂಭ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಇಲಕಲ್ಲ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ,  ಬೇರೆ ಜಾತಿಗಳ ನಡುವೆ ವಿವಾಹ ಸಂಬಂಧ ನಡೆಯಬೇಕು ಎಂದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಇಲಕಲ್ಲ ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಸ್ವಾಮೀಜಿ, ಬಾಗಲಕೋಟೆ ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವತತ್ತ್ವ ಚಿಂತಕ, ಬೀದರ್ ಬಸವ ಕೇಂದ್ರದ ಅನ್ನಪೂರ್ಣ ಅಕ್ಕ ಬಸವ ಸಂಚಾರ ಯಾತ್ರೆಯ ಕುರಿತು ಮಾತನಾಡಿದರು

ಸಮಾರಂಭದಲ್ಲಿ ಬಾಗಲಕೋಟೆ ರಾಷ್ಟ್ರೀಯ ಬಸವ ದಳದ ಬಸವರಾಜ ಸ್ವಾಮೀಜಿ, ತಂಗಡಗಿ ಹಡಪದ ಪೀಠದ ಅಪ್ಪಣ್ಣ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ರಬಕವಿಯ ಪ್ರಭುದೇವ ಸ್ವಾಮೀಜಿ, ಬಾದಾಮಿಯ ಪ್ರನಾಳೇಶ್ವರ ಸ್ವಾಮೀಜಿ, ನಾಯಕನಟ್ಟಿಯ ಬಸವಸ್ವಾಮೀಜಿ, ಶಿರಗುಪ್ಪದ ಬಸವಭೂಷಣ ಸ್ವಾಮೀಜಿ, ಚಿತ್ರದುರ್ಗ ಬಸವಹರಳಯ್ಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು. ಬಸವ ಸಂಚಾರ ಕಲಾವಿದರು ಪ್ರಾರ್ಥಿಸಿದರು. ಬಿ.ಐ. ಬಡಿಗೇರ ಸ್ವಾಗತಿಸಿದರು, ಎಸ್.ಜಿ. ಪ್ರಭು ವಂದಿಸಿದರು. ಧ್ಯಾನೇಶ ನಿರೂಪಿಸಿದರು. ಸಮಾರಂಭಕ್ಕೂ ಪೂರ್ವದಲ್ಲಿ ಮರಣವೇ ಮಹಾನವಮಿ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT