ADVERTISEMENT

ದುಶ್ಚಟ ದೂರ ಮಾಡಿದ ಮಹಾಂತರ ಜೋಳಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 6:25 IST
Last Updated 2 ಜುಲೈ 2012, 6:25 IST

ಇಳಕಲ್: ಇಲ್ಲಿಯ ಡಾ.ಮಹಾಂತ ಸ್ವಾಮೀಜಿ ಅವರು 37 ವರ್ಷಗಳ ಹಿಂದೆ ನಾಡಿನ ಮಠಾಧೀಶರ ಸಮ್ಮೇಳನ   ಮೂಲಕ ಸಾಮಾಜಿಕ ಜಾಗೃತಿಗಾಗಿ ಎಲ್ಲರನ್ನು ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಆದರೆ ನಿರೀಕ್ಷಿತ ಬೆಂಬಲ ದೊರೆಯದೇ ಹೋದಾಗ ಮರು ವರ್ಷ ಅಂದರೆ 1975 ರಿಂದ ಏಕಾಂಗಿಯಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಜೋಳಿಗೆ ಹಾಕಿಕೊಂಡು ಅಖಾಡಕ್ಕಿಳಿದರು. ಪ್ರಚಾರ, ಪ್ರಸಿದ್ಧಿಗೆ ಹಾತೊರೆಯದ ಸ್ವಾಮೀಜಿ ಮಹಾಂತ ಜೋಳಿಗೆಯೊಂದಿಗೆ ನಿರಂತರವಾಗಿ ಹಳ್ಳಿ, ಕೇರಿ ಎನ್ನದೇ ಎಲ್ಲೆಡೆ ಸುತ್ತಿದರು.

ಧರ್ಮ ಹಾಗೂ ಸ್ವಾಮಿತ್ವವನ್ನು ಮುಂದು ಮಾಡಿಕೊಂಡು ಕೇವಲ ಚಟಗಳ ಭಿಕ್ಷೆ ಬೇಡಲಿಲ್ಲ. ದುಶ್ಚಟಗಳಿಂದ ಆರೋಗ್ಯದ ಮೇಲೆ, ಸಾಮಾಜಿಕ ಸ್ಥಾನಮಾನ ಮೇಲೆ, ಕೌಟುಂಬಿಕ ಸಂಬಂಧಗಳ ಮೇಲೆ, ಆರ್ಥಿಕ ಸ್ಥಿತಿಗತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ದುರ್ಗುಣಗಳು ಹೇಗೆ ಸಂಬಂಧಗಳನ್ನು ಹಾಳುಗಡವಿ ಮನಸ್ಸಿನ ನೆಮ್ಮದಿ ಹಾಳುಮಾಡುತ್ತದೆ. ಮೂಢನಂಬಿಕೆಗಳು, ಅಂಧಶ್ರದ್ಧೆಗಳು ಹೇಗೆ ಶೋಷಣೆಗೆ ಗುರಿ ಮಾಡುತ್ತವೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟು ಜನರ ಮನ ಒಲಿಸಿದರು. ಮತ್ತೆ ಹಳೆ ಚಾಳಿಗೆ ಮರಳದಂತೆ ಕಾವಲು ಇಟ್ಟ ಅಸ್ತ್ರವಾಗಿ ಮಹಾಂತ ಜೋಳಿಗೆ ಬಳಸಲಾಯಿತು.

ದುಶ್ಚಟಗಳನ್ನು ಭಿಕ್ಷೆ ಬೇಡುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ, ಪಟ್ಟಣ, ಹೊರ ರಾಜ್ಯ ಕೊನೆಗೆ ಹೊರದೇಶಕ್ಕೂ ಹೋಗಿ ಬಂದ ಸ್ವಾಮೀಜಿ ಅಂದಾಜು 3 ಲಕ್ಷ ಜನರನ್ನು ದುಶ್ಚಟಗಳಿಂದ ವಿಮುಖರನ್ನಾಗಿಸಿದರು.

ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಶ್ರಮಿಸಿದ ಡಾ.ಮಹಾಂತ ಸ್ವಾಮೀಜಿ ಅವರನ್ನು ಕರ್ನಾಟಕ ರಾಜ್ಯ ಮದ್ಯಪಾನ   ಸಂಯಮ ಮಂಡಳಿ 2012 ರ `ಸಂಯಮ ಪ್ರಶಸ್ತಿ~ ನೀಡಿ, ಬಾಗಲಕೋಟೆಯಲ್ಲಿ ಜು.2 ರಂದು ಗೌರವಿಸಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.