ADVERTISEMENT

‘ನಾಡಿಗೆ ಕೀರ್ತಿ ತಂದ ಕವಿ ರನ್ನ’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 7:41 IST
Last Updated 24 ಫೆಬ್ರುವರಿ 2018, 7:41 IST

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ಶುಕ್ರವಾರ ಬೆಳಿಗ್ಗೆ ರನ್ನ ರಥ ಮತ್ತು ಜನಪದ ವಾಹಿನಿಯ ವಿವಿಧ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಗದೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪುರ, ‘ನಾಡಿಗೆ ಕೀರ್ತಿ ತಂದ ರನ್ನ ಕವಿ ಚಕ್ರವರ್ತಿಯ ಕವಿತೆಗಳ ಸಾಲು ಎಂದೂ ಮರೆಯಲಾಗದು’ ಎಂದರು.

‘ರನ್ನನದು ಒಣ ಹೆಮ್ಮೆಯಲ್ಲ, ಸ್ವಂತದ ಹಿರಿಮೆ ಅರಿಯುವ ಗುರು ರತ್ನ ಅವನು. ತಕ್ಕ ತಂತ್ರವನ್ನು ರಚಿಸುವ ಪಂಪ ನೀತಿ ಚಿತ್ತಾರವಾಗಿ ತನ್ನ ಹುಟ್ಟು ಮತ್ತು ಗುಟ್ಟುಗಳನ್ನು ತೆರೆದಿಟ್ಟ ಗಟ್ಟಿ ಕವಿ ರನ್ನ. ಇಂಥ ಮಹಾಕವಿ ಸ್ಮರಣೆ  ಸದಾ ನಡೆಯಲಿ’ ಎಂದರು.

‘ಇಂದಿನ ಕಾಲಕ್ಕೆ ರನ್ನನ ವಿಚಾರಧಾರೆ ಪ್ರಸ್ತುತವಾಗಿವೆ. ನಾನು ಉಸ್ತುವಾರಿ ಸಚಿವನಾಗಿ ಈ ಉತ್ಸವಕ್ಕೆ ಚಾಲನೆ ನೀಡಿದ್ದು ನನ್ನ ಭಾಗ್ಯ ಎಂದು ತಿಳಿಯುತ್ತೇನೆ. ಎಲ್ಲರೂ ಈ ವೈಭವದ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು’ ಎಂದು ಹೇಳಿದರು.

ADVERTISEMENT

ಶಾಸಕ ಗೋವಿಂದ ಕಾರಜೋಳ ಮಾತ ನಾಡಿ,10ನೇ ಶತಮಾನದ ರನ್ನನ ಗತವೈಭವನ್ನು ಮತ್ತೆ ಅನಾವರಣಗೊಳ್ಳಬೇಕು. ನಾಡಿನ ಕಲಾವಿದರಿಗೆ ಸಾಹಿತಿಗಳಿಗೆ ಕವಿಗಳಿಗೆ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

ಇದಕ್ಕೂ ಮುನ್ನ ವಿವಿಧ ಊರು ಜಿಲ್ಲೆಗಳಿಂದ ಆಗಮಿಸಿದ ಕಲಾ ತಂಡಗಳಿಂದ ಸಂಬಾಳವಾದನ, ಹಲಗೆ ವಾದನ, ಕರಡಿ ಮಜಲು, ಡೊಳ್ಳು ಕುಣಿತ, ಜಾಂಜ್‌ ಪಥ, ದಟ್ಟಿ ಕುಣಿತ, ತಾಸೆ ವಾದನ, ಛತ್ರಿ, ಕುದುರೆ, ಸಾರೋಟು, ಚಾಮರ, ಕೀರ್ತಿ ಧ್ವಜ, ಕೊಂಬು ಕಹಳೆ, ಜಾಗಟೆ, ಪೂರ್ಣ ಕುಂಭ ಮೇಳ ಮನಸೆಳೆದವು.

ವೈಭವಕ್ಕೆ ಸಜ್ಜಾದ ನಗರಿ

ಮುಧೋಳ: ರನ್ನ ವೈಭವ ಸಾಂಸ್ಕೃತಿಕ ಉತ್ಸವ ಶನಿವಾರದಿಂದ ಎರಡು ದಿನ ನಡೆಯಲಿದೆ. ಎಲ್ಲ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕಣ್ಣು ಹಾಯಿಸಿದೆಲ್ಲಡೆ ಸ್ವಾಗತದ ಫ್ಲೆಕ್ಸ್ ರಾರಾಜಿಸುತ್ತಿವೆ.

ಶನಿವಾರ ಬೆಳಿಗ್ಗೆ 10ಕ್ಕೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದವರೆಗೆ ಜನಪದ ವಾಹಿನಿ ಕಲಾ ತಂಡಗಳಿಂದ ನಡೆಯುವ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಶಾಸಕ ಗೋವಿಂದ ಕಾರಜೋಳ ಉಪಸ್ಥಿತಿಯಲ್ಲಿ 35 ಕಲಾ ತಂಡಗಳು ಭಾಗವಹಿಸಲಿವೆ.

ಮೆರವಣಿಗೆಯಲ್ಲಿ ಆನೆ, ಅಂಬಾರಿ, ಕುದುರೆ, ಸಾರೋಟು, ಛತ್ರಿ, ಚಾಮರ, ಕೀರ್ತಿಧ್ವಜ, ಕೊಂಬು, ಕಹಳೆ, ಜಾಗಟೆ, ಪೂರ್ಣಕುಂಭ, ಕರ್ನಾಟಕದ ವೈವಿಧ್ಯಮಯ ಕಲಾ ತಂಡಗಳು ವಿಶೇಷ ಆಕರ್ಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.