ADVERTISEMENT

ಪರಂಪರೆ ಮರೆಯದಿರಿ: ದಡ್ಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 9:30 IST
Last Updated 4 ಮಾರ್ಚ್ 2011, 9:30 IST
ಪರಂಪರೆ ಮರೆಯದಿರಿ: ದಡ್ಡಿ
ಪರಂಪರೆ ಮರೆಯದಿರಿ: ದಡ್ಡಿ   

ಜಮಖಂಡಿ: ಜಾನಪದ ಕಲೆಗಳಾದ ಖಣಿ ವಾದನ, ಸಂಬಾಳ ವಾದನ, ಕರಡಿ ಮೇಳ, ಡೊಳ್ಳು ಕುಣಿತ ಇತ್ಯಾದಿಗಳ ಮೂಲಕ ದೊರೆಯುವ ಮನರಂಜನೆಯ ಜೊತೆಗೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯ ವೈಜ್ಞಾನಿಕ ಅಂಶಗಳು ಕೂಡ ಅಡಗಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಜಿ. ದಡ್ಡಿ ಅಭಿಪ್ರಾಯಪಟ್ಟರು.ಸ್ಥಳೀಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ‘ಪರಂಪರೆ ಕೂಟ’ದ ಅಶ್ರಯದಲ್ಲಿ ಕಾಲೇಜಿನ ಸಭಾ ಭವನದಲ್ಲಿ ಗುರುವಾರ ಬೆಳಿಗ್ಗೆ ಏರ್ಪಡಿಸಿದ್ದ ‘ಪರಂಪರೆ ಜಾಗೃತಿ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ಪರಂಪರೆಗಳನ್ನು ಮರೆಯಲಾಗುತ್ತಿದೆ. ಪರಂಪರೆ ನಾಶವಾದರೆ ಶರೀರ ಸಂಪತ್ತು ನಾಶವಾಗುತ್ತದೆ. ಪರಂಪರೆ ಹಾಳಾದರೆ ಸಾಮಾಜಿಕ, ಆಧ್ಯಾತ್ಮಿಕ ಜೀವನಕ್ಕೆ ಕೊಡಲಿ ಏಟು ಬೀಳುತ್ತದೆ. ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ವಿನಾಶಕ್ಕೆ ನಾಂದಿಯಾಗುತ್ತದೆ ಎಂದು ಎಚ್ಚರಿಸಿದರು.

ಬನಹಟ್ಟಿಯ ಎಸ್‌ಟಿಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಂಗಮೇಶ ಮಟೋಳಿ ಮಾತನಾಡಿ, ಉತ್ತರ ಕರ್ನಾಟಕ ಬೆರಳೆಣಿಕೆಯ ಗ್ರಾಮಗಳಲ್ಲಿ ಮಾತ್ರ ಈಗ ಜಾನಪದ ಕಲೆ ಉಳಿದುಕೊಂಡಿದೆ. ಜಾನಪದ ಕಲೆ ಉಳಿದು ಬೆಳೆಯಬೇಕಾದರೆ ಅದಕ್ಕೆ ವೃತ್ತಿಯ ಸೋಗು ಅಗತ್ಯ. ಇಲ್ಲದಿದ್ದರೆ ಜಾನಪದ ಕಲೆ ಕಣ್ಮರೆ ಆಗುವ ಅಪಾಯವಿದೆ ಎಂದರು.

ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಿ ಮಡಿವಾಳರ ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಎ.ವಿ.ಸೂರ್ಯವಂಶಿ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಪಿ.ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಿ.ಐ.ಕರಲಟ್ಟಿ ನಿರೂಪಿಸಿದರು. ಪ್ರೊ.ಎಸ್.ಪಿ.ಮದ್ರೇಕರ ವಂದಿಸಿದರು.ಡಾ.ಸಂಗಮೇಶ ಮಟೋಳಿ ಹಾಗೂ ಅವರ ಕಲಾ ತಂಡದ ಸದಸ್ಯರು ಖಣಿ ವಾದನ ಪ್ರಾತ್ಯಕ್ಷಿಕೆ ನೀಡಿ ವಿದ್ಯಾರ್ಥಿಗಳ ಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.