ADVERTISEMENT

ಬನಹಟ್ಟಿ: ನೀರಿಗಾಗಿ ಪರದಾಟ

ನೀರು ನೀಡಲು ನಾಗರಿಕರಿಗೆ ಪೌರಾಯುಕ್ತ ಮನವಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:16 IST
Last Updated 12 ಮೇ 2018, 8:16 IST
ಬನಹಟ್ಟಿಯ ಸೋಮವಾರ ಪೇಟೆಯ ಹತ್ತಿರ ನೀರಿಗಾಗಿ ಜನರು ಸರತಿಯಲ್ಲಿ ನಿಂತಿರುವುದು
ಬನಹಟ್ಟಿಯ ಸೋಮವಾರ ಪೇಟೆಯ ಹತ್ತಿರ ನೀರಿಗಾಗಿ ಜನರು ಸರತಿಯಲ್ಲಿ ನಿಂತಿರುವುದು   

ರಬಕವಿ ಬನಹಟ್ಟಿ: ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಜೀವ ನದಿಯಾಗಿರುವ ಕೃಷ್ಣಾ ನದಿ ಸಂಪೂರ್ಣವಾಗಿ ಖಾಲಿಯಾಗಿದ್ದು, ನದಿ ತೀರದ ಲಕ್ಷಾಂತರ ಜನ ಮತ್ತು ಜಾನುವಾರುಗಳಿಗೆ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯಾಗಲಿದೆ.

ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿ ಅಳಿದುಳಿದ ನೀರನ್ನು ರೈತರು ಪಂಪ್‌ಸೆಟ್‌ಗಳನ್ನು ಬಳಸಿಕೊಂಡು ತಮ್ಮ ಹೊಲ ಮತ್ತು ತೋಟಗಳಿಗೆ ಹಾಯಿಸಿ ಕೊಳ್ಳುತ್ತಿದ್ದಾರೆ.  ಕಳೆದು ಏಳೆಂಟು ದಿನಗಳಿಂದ ನಳಗಳಿಗೆ ನೀರು ಬಂದಿಲ್ಲ. ಜನರು ಈಗ ಹಗಲು ರಾತ್ರಿ ನೀರಿನ ಸಲುವಾಗಿ ಪರದಾಡುತ್ತಿದ್ದಾರೆ. ವಿಧಾನ ಸಭೆಯ ಚುನಾವಣೆ ಇರುವುದರಿಂದ ಜನ
ಪ್ರತಿನಿಧಿಗಳು ಓಟಿಗಾಗಿ ಓಡಾಡುತ್ತಿದ್ದರೆ, ಅಧಿಕಾರಿಗಳು ಚುನಾವಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರಿಬ್ಬರ ಮಧ್ಯದಲ್ಲಿ ಪ್ರಜೆಗಳು ನೀರಿಗಾಗಿ ಪರದಾಡುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದಿಂದ ವಿವಿಧ ಜಲಾಶಯಗಳಿಂದ ನೀರನ್ನು ಬಿಡಿಸುವ ವ್ಯವಸ್ಥೆಯನ್ನು ಮಾಡಬೇಕು. ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಯಾವುದೇ ಚಿಂತೆಯಿಲ್ಲದಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ADVERTISEMENT

ನಗರದ ಬಾವಿ ಮತ್ತು ಕೊಳವೆ ಬಾವಿಗಳ ಮುಂದೆ ಈಗ ಜನರು ನೀರಿಗಾಗಿ ಸರತಿಯಲ್ಲಿ ನಿಂತಿರುವುದು ಎಲ್ಲ ಕಡೆಗೆ ಕಂಡು ಬರುತ್ತಿದೆ.

ವಿನಂತಿ: ನಗರಸಭೆ ವ್ಯಾಪ್ತಿಯಲ್ಲಿ ಲಭ್ಯವಿರುವ ನಗರಸಭೆಯ ಹಾಗೂ ಖಾಸಗಿ ಒಡೆತನದ ಕುಡಿಯುವ ನೀರಿನ ಮೂಲಗಳಾದ ಕೊಳವೆ ಬಾವಿ, ತೆರೆದ ಬಾವಿಗಳಿಂದ ದೊರೆಯುವ ನೀರನ್ನು ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಕಾಯಿಸಿ, ಆರಿಸಿ, ಸೋಸಿ ಕುಡಿಯುವದು ಮತ್ತು ಬಳಸಬೇಕು.

‘ಇಂತಹ ಸ್ಥಿತಿಯಲ್ಲಿ ಅವಳಿ ನಗರಗಳ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಸಾರ್ವಜನಿಕರು ಸಹಕರಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಒಡೆತನದ ಕೊಳವೆ ಬಾವಿ ಮತ್ತು ತೆರೆದ ಬಾವಿಗಳನ್ನು ಹೊಂದಿರುವವರು ಲಭ್ಯವಿರುವ ನೀರನ್ನು ಅಕ್ಕ ಪಕ್ಕದವರಿಗೆ, ಓಣಿಯಲ್ಲಿನ ಸಾರ್ವಜನಿಕರಿಗೆ ಪೂರೈಸಲು ಸಹಕರಿಸಬೇಕು. ಅತ್ಯಮೂಲ್ಯವಾದ ನೀರನ್ನು ದಾನ ಮಾಡಬೇಕು’ ಎಂದು ಪೌರಾಯುಕ್ತ ಆರ್‌.ಎಂ.ಕೊಡುಗೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.