ADVERTISEMENT

ಬರಗಾಲ ಹಿನ್ನೆಲೆ: ಸರಳ ಸ್ವಾತಂತ್ರೋತ್ಸವಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 8:50 IST
Last Updated 9 ಆಗಸ್ಟ್ 2012, 8:50 IST

ಮಹಾಲಿಂಗಪುರ :  ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೇ  ಬರಗಾಲ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ  ಸ್ವಾತಂತ್ರೋತ್ಸವವನ್ನು  ಸರಳವಾಗಿ ಆಚರಿಸಲು ಪುರಸಭೆ ನಿರ್ಧರಿಸಿದೆ.

ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಾರಿ ದಸರಾ ಕಾರ್ಯಕ್ರಮ ಹಾಗೂ ಉಳಿದ ಉತ್ಸವಗಳನ್ನು ಸರ್ಕಾರ ಮೊಟಕುಗೊಳಿಸುವ ನಿರ್ಧಾರ ಮಾಡಿದಂತೆ  ಬರಗಾಲದಿಂದ ತತ್ತರಿಸುತ್ತಿರುವ ನಮ್ಮ ಊರಿನಲ್ಲಿ ಕೂಡ  ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಿ ಎಂದು ಪುರಸಭಾ ಸದಸ್ಯರಾದ ಬಸವರಾಜ ರಾಯರ, ಶಿವಲಿಂಗ ಘಂಟಿ ಹಾಗೂ ಮಹಾಲಿಂಗ ಕುಳ್ಳೊಳ್ಳಿ ಅಭಿಪ್ರಾಯಪಟ್ಟರು. ಇದಕ್ಕೆ ಸಭೆ ತನ್ನ ಅನುಮೋದನೆ ನೀಡಿತು.

ಪುರಸಭೆಗೆ ತನ್ನದೇ ಆದ ವಾಹನ ವಿದ್ದರೂ ಬಾಡಿಗೆ ವಾಹನ ಉಪಯೋಗಿಸುವುದನ್ನು ನಿಲ್ಲಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು. ಈಗಾಗಲೇ ಟೆಂಡರ್ ಪಡೆದು ಈವರೆಗೆ ಕೆಲಸ ಆರಂಭಿಸದಿದ್ದ ಗುತ್ತಿಗೆದಾರರ ಗುತ್ತಿಗೆರದ್ದುಗೊಳಿಸಿ ಬೇಗನೇ ಬೇರೆಯವರಿಗೆ ನೀಡಲು ಸಭೆ ಒಪ್ಪಿಗೆ ನೀಡಿತು.

ಪುರಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಆಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳು ಬಳಕೆ ಯಾಗುತ್ತಿವೆ.  ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪ್ಪತಸ್ಥರಿಗೆ ದಂಡ ಹಾಕಲು ಸಭೆ ಒತ್ತಾಯಿಸಿತು.
ನಗರದಲ್ಲಿ ಬ್ಯಾನರ್ ಹಾಗೂ ಯಾವುದೇ ರೀತಿಯ ಪ್ರಚಾರದ ಬೋರ್ಡ್‌ಗಳನ್ನು ಹಾಕಲು ಪುರಸಭೆಯ ಪರವಾನಿಗೆ ಪಡೆಯಲು ಸೂಚಿಸಿದ್ದರೂ  ಗರದಲ್ಲಿ 39 ಅನಧಿಕೃತವಾಗಿ ಹಾಕಲಾದ ಪ್ರಚಾರ ಸಾಮಗ್ರಿಗಳಿವೆ ಅವುಗಳನ್ನು ತೆಗೆಸಲಾಗುವುದೆಂದು ಮುಖ್ಯಾಧಿಕಾರಿ ವಿವರಣೆ ನೀಡಿದರು. 

ಕಳೆದ ಬಾರಿ ಸದಸ್ಯರು ಕೇಳಿದ ಕಂಪ್ಯೂಟರ್ ಕುರಿತಾದ ಮಾಹಿತಿಯನ್ನು ಈ ಬಾರಿಯೂ ಸರಿಯಾಗಿ ನೀಡದೇ ಇದ್ದುದಕ್ಕಾಗಿ ಸದಸ್ಯರೆಲ್ಲ ಮಾಹಿತಿಯನ್ನು ಎರಡು ದಿನಗಳಲ್ಲಿ ಕೊಡಲು ಹೇಳಿದರು.

ಪುರಸಭೆಯ ಅಧ್ಯಕ್ಷ ಜಿ.ಎಸ್.ಗೊಂಬಿ ಅಧ್ಯಕ್ಷತೆ ವಹಿಸಿ ಅರಂಭಿಸಬೇಕಾದ ಎಲ್ಲ ಕಾಮಗಾರಿಗಳನ್ನು ಬೇಗನೇ ಆರಂಭಿಸುವುದಾಗಿ ಹೇಳಿದರು ಉಪಾಧ್ಯಕ್ಷೆ ಕಸ್ತೂರಿ ಸಂಶಿ ಹಾಗೂ ಮುಖ್ಯಾಧಿಕಾರಿ ಎಸ್.ಎ.ಮಹಾಜನ ವೇದಿಕೆ ಮೇಲಿದ್ದರು.

ಸ್ಥಾಯಿ ಸಮೀತಿ ಚೇರಮನ್ ಅಂಬಿಕಾ ಬುರುಡ, ಸದಸ್ಯರಾದ ಶೇಖರ ಅಂಗಡಿ, ಮಹಾಲಿಂಗ ಕಂಠಿ, ಅಲ್ಲಾಮಾ ಹಳಿಂಗಳಿ, ಮಹಾಲಿಂಗಪ್ಪ ಲಾತೂರ, ಬಸವರಾಜ ಮಡ್ಡೇನವರ, ಎಂ.ಸಿ.ಗಾಡಿವಡ್ಡರ ಹಾಗೂ ಹಿಂದಿನ ಅಧ್ಯಕ್ಷ ಪ್ರಕಾಶ ಅರಳೀಕಟ್ಟಿ ಹಾಗೂ  ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.