ADVERTISEMENT

ಮಾದಿಗ ಮೀಸಲಾತಿ ಹೋರಾಟ ಸಮಿತಿ: ಕರಾಳ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:11 IST
Last Updated 12 ಡಿಸೆಂಬರ್ 2013, 8:11 IST

ಮುಧೋಳ-: ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ 2012ರ ಡಿ. 11ರಂದು  ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನಸಾಗರ ಮುತ್ತಿಗೆ ಹಾಕಿತ್ತು. ಈ ಶಕ್ತಿಯುತ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ  ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಮುಗ್ಧ ಮಾದಿಗರ ಮೇಲೆ ದೌರ್ಜನ್ಯ ನಡೆಸಿ ರಕ್ತ ಹರಿಸಿದರು ಎಂದು  ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಮೇತ್ರಿ ಹೇಳಿದರು.

ಬುಧವಾರ  ಡಾ. ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ,  ಮಾದಿಗರ ಮೇಲೆ ಆದ ದೌರ್ಜನ್ಯವನ್ನು  ಕರಾಳ ದಿನವೆಂದು ಆಚರಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೆ ನಮ್ಮ ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯಬೇಕು.  ನ್ಯಾಯ­ಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಿಬೇಕು ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಸಗರೆಣ್ಣವರ ಮಾತನಾಡಿದರು. ಹಣಮಂತ ಪೂಜಾರಿ, ಸತೀಶ ಗಾಡಿ, ಸದಾಶಿವ ಮೇತ್ರಿ, ಯಶವಂತ ಕಾಳಮ್ಮನವರ, ಸಣ್ಣಪ್ಪ ಮೀಶಿ, ಸದಾಶಿವ ಕುರೆಣ್ಣವರ, ರಮೇಶ ಮೇತ್ರಿ, ಯಲ್ಲಪ್ಪ  ಚಿಚಖಂಡಿ, ರವಿ ಲೋಕಾಪೂರ, ಯಮನಪ್ಪ ಪೂಜಾರಿ, ಭೀಮಶಿ ಮೇತ್ರಿ, ರವಿ ರಂಜಣಗಿ, ಅಶೋಕ ಮುಗಳಖೋಡ, ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.