ADVERTISEMENT

ಮಾಹಿತಿ ಹಕ್ಕು ದುರುಪಯೋಗ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:45 IST
Last Updated 7 ಫೆಬ್ರುವರಿ 2012, 9:45 IST

ಬಾಗಲಕೋಟೆ: `ಸರ್ಕಾರಿ ಆಡಳಿತ ಪಾರದರ್ಶಕ ವಾಗಿರಬೇಕೆಂಬ ಉದ್ದೇಶದಿಂದ ರಾಷ್ಟ್ರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಮಾಡ ಲಾಗಿದ್ದು ಇದನ್ನು ಯಾರೂ ದುರುಪಯೋಗಪಡಿ ಸಿಕೊಳ್ಳಲು ಸಾಧ್ಯವಿಲ್ಲ~ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಶೇಖರ ಡಿ. ಸಜ್ಜನ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದು ತೊಂದರೆ ನೀಡುತ್ತಾರೆ ಎಂಬ ವಾದವನ್ನು ಅಲ್ಲಗಳೆದರು.

ಮಾಹಿತಿ ಹಕ್ಕು ಅಧಿನಿಯಮ ನಾಗರಿಕ ಸ್ನೇಹಿ ಯಾಗಿದ್ದು ವ್ಯಕ್ತಿ ಎಷ್ಟು ಮಾಹಿತಿಯನ್ನಾದರೂ ಪಡೆದುಕೊಳ್ಳಬಹುದು. ಇದರಿಂದ ಸರ್ಕಾರಿ ಅಧಿ ಕಾರಿಗೆ ಕಿರಿಕಿರಿಯಾಗುತ್ತದೆ ಎನ್ನುವುದಾಗಲಿ, ಸಿಬ್ಬಂದಿ ಕೊರತೆ ಇದೆ ಎನ್ನುವುದಾಗಲಿ ಸಲ್ಲದು ಎಂದು ಅವರು ಹೇಳಿದರು.

`ರಾಜ್ಯ ಮಾಹಿತಿ ಆಯೋಗಕ್ಕೆ ಪ್ರಸ್ತುತ ಆರು ಆಯುಕ್ತರಿದ್ದು, ಪ್ರತಿಯೊಬ್ಬರು ತಿಂಗಳಲ್ಲಿ ಒಂದು ವಾರ ಜಿಲ್ಲಾ ಪ್ರವಾಸ ಕೈಗೊಂಡು ದೂರುಗಳ ವಿಚಾರಣೆ ನಡೆಸುತ್ತೇವೆ. ಬಳಿಕ ಒಂದು ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ದೂರುಗಳ ವಿಚಾ ರಣೆ ಮಾಡಲಾಗುತ್ತದೆ~ ಎಂದು ತಿಳಿಸಿದರು.

ಆಯೋಗಕ್ಕೆ ಆರು ಜನ ಆಯುಕ್ತರನ್ನು ನೇಮಕ ಮಾಡುವ ಮೊದಲು 15 ಸಾವಿರ ದೂರುಗಳು ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು, ಇದೀಗ 6 ಸಾವಿರ ದೂರುಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದರು.

ಸಾರ್ವಜನಿಕರು ನೀಡುವ ದೂರುಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸಲಾಗುತ್ತಿದೆ, ಮುಂದಿನ ದಿನದಲ್ಲಿ ಇದರ ವೇಗವನ್ನು ಹೆಚ್ಚಿಸಿ ಎರಡು ತಿಂಗಳ ಒಳಗಾಗಿ ದೂರುಗಳನ್ನು ಇತ್ಯರ್ಥ ಪಡಿಸಲು ಆಯೋಗ ಮುಂದಾಗಿದೆ ಎಂದರು.

ಸರ್ಕಾರದ ಆಯಾ ಇಲಾಖೆಗಳು ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಡ್ಡಾಯವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರು, ಸಂಪರ್ಕ, ಇಲಾಖೆ ಸಾಮಾನ್ಯ ಮಾಹಿತಿ ಫಲಕವನ್ನು ಅಳವಡಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರು ಆಯೋಗಕ್ಕೆ ದೂರು ನೀಡು ವಾಗ 150 ಪದಗಳಿಗೆ ಮೀರದಂತೆ ಅರ್ಜಿ ಸಲ್ಲಿಸ ಬೇಕು ಎಂದು ಸಲಹೆ ಮಾಡಿದರು.

ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಮಾಹಿತಿ ಹಕ್ಕಿನ ಬಗ್ಗೆ ಜನರಿಗೆ ಅಷ್ಟೊಂದು ಪ್ರಜ್ಞೆ ಮೂಡಿಲ್ಲ, ಬಾಗಲಕೋಟೆ ಈ ವಿಷಯದಲ್ಲಿ ಸ್ವಲ್ಪ ಉತ್ತಮವಾಗಿದೆ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಜನತೆ ಮಾಹಿತಿ ಹಕ್ಕಿನ ಬಗ್ಗೆ ಹೆಚ್ಚು ಜ್ಞಾನಹೊಂದಿದ್ದಾರೆ, ಅಲ್ಲಿ ಸರ್ಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಮಾಹಿತಿ ಹಕ್ಕಿನಡಿ ಎನ್‌ಆರ್‌ಇಜಿ, ಕಂದಾಯ ಇಲಾಖೆ, ಬಿಬಿಎಂಪಿ, ಪೊಲೀಸ್, ಬಿಡಿಎ ಬಗ್ಗೆ ಮಾಹಿತಿಗಾಗಿ ಹೆಚ್ಚು ಅರ್ಜಿ ಮತತು ದೂರುಗಳು ಆಯೋಗಕ್ಕೆ ಬರುತ್ತಿರುವುದಾಗಿ ಹೇಳಿದರು.
ಬಳಿಕ ಆಯುಕ್ತರು ಸಾರ್ವಜನಿಕರ 23 ದೂರುಗಳ ವಿಚಾರಣೆ ನಡೆಸಿದರು. ಮಂಗಳವಾರ ಉಳಿದ 23 ದೂರುಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.