ADVERTISEMENT

ರನ್ನಬೆಳಗಲಿಯಲ್ಲಿ ಮೌನೇಶ್ವರ ಜಯಂತ್ಯುತ್ಸವ

ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 5:39 IST
Last Updated 7 ಡಿಸೆಂಬರ್ 2017, 5:39 IST
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಗದ್ದಗಿ ಗುಡಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಗದ್ಗುರು ಮೌನೇಶ್ವರ ಜಯಂತ್ಯುತ್ಸವದ ನಿಮಿತ್ತ ಪಲ್ಲಕ್ಕಿ ಉತ್ಸವ ಜರುಗಿತು
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಗದ್ದಗಿ ಗುಡಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಗದ್ಗುರು ಮೌನೇಶ್ವರ ಜಯಂತ್ಯುತ್ಸವದ ನಿಮಿತ್ತ ಪಲ್ಲಕ್ಕಿ ಉತ್ಸವ ಜರುಗಿತು   

ಮಹಾಲಿಂಗಪುರ: ‘ಸಮಾಜ ಸಂಘಟನೆ ಗಳು ಕ್ರಿಯಾಶೀಲವಿದ್ದಾಗ ಅವುಗಳ ಬೆಳವಣಿಗೆಯ ವೇಗ ಹೆಚ್ಚಾಗಿರುತ್ತದೆ. ಸಮಾಜ ಸಂಘಟನೆಗಳು ನಿರಂತರ ಸಮಾಜದ ಅಭಿವೃದ್ಧಿಗಾಗಿ ಬದುಕಿನ ಹಲವು ಸಮಯ ಮೀಸಲಾಗಿಡು ವುದರಿಂದ ಮಾತ್ರ ಅಭಿವೃದ್ದಿ ಸಾಧ್ಯ’ ಎಂದು ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ ಹೇಳಿದರು.

ಸಮೀಪದ ರನ್ನಬೆಳಗಲಿಯ ಗದ್ದಗಿ ಗುಡಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ 3ನೇ ವರ್ಷದ ಶ್ರೀ ಜಗದ್ಗುರು ಮೌನೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಧೋಳ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ವಿ. ಕೊಪ್ಪದ ಮಾತನಾಡಿ, ‘ವಿಶ್ವಕರ್ಮ ಜನಾಂಗ ಇತರರಿಗೆ ಆದರ್ಶಮಯ. ಹಿಂದೂ ಮುಸ್ಲಿಂ ಭಾವೈಕ್ಯಕ್ಕೆ ಜೀವಂತ ಸಾಕ್ಷಿಯಾದ ತಿಂಥಣಿ ಕ್ಷೇತ್ರದ ಜಗದ್ಗುರು ಮೌನೇಶ್ವರರ ವಚನ, ತತ್ವಾದರ್ಶ ಅಳವಡಿಸಿಕೊಳ್ಳುವ ಮೂಲಕ ಆಚರಣೆಗೆ ಅರ್ಥ ನೀಡಬೇಕು’ ಎಂದರು.

ADVERTISEMENT

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಎಚ್. ಕಂಬಾರ ಮಾತನಾಡಿ, ‘ಮನುಕುಲದ ತೊಟ್ಟಿಲಿನಿಂದ ಚಟ್ಟದವರೆಗೆ ಎಲ್ಲ ಹಂತಗಳಲ್ಲೂ ಉಪಕಾರಿ ವಿಶ್ವಕರ್ಮ ಸಮಾಜ ಇಂದು ಸೌಲಭ್ಯ ವಂಚಿತ ಕಟ್ಟ ಕಡೆಯ ಜನಾಂಗವಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ವಿಶ್ವಕರ್ಮರಿಗೆ ಆದ್ಯತೆ ನೀಡುವ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಮಾಡಿದರು.

ಪ್ರವಚನ ಪ್ರವೀಣ, ಸಂಗೀತ ಶಿಕ್ಷಕ ಮಹಾಲಿಂಗ ಶಾಸ್ತ್ರಿಗಳು ಪ್ರವಚನ ನೀಡಿದರು. ಸಾನ್ನಿಧ್ಯ ವಹಿಸಿದ ಸಿದ್ದರಾಮ ಶಿವಯೋಗಿಗಳು ಆಶೀರ್ವಚನ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಹರ ಪತ್ತಾರ, ಪರಮಾನಂದ ಬಡಿಗೇರ, ಮಾನಪ್ಪ ಲೋಹಾರ, ಸಮಾಜದ ಹಿರಿಯ ಕಾಳಪ್ಪ ಸುತಾರ, ಸಾಧಕ ವಿದ್ಯಾರ್ಥಿ ರಾಘವೇಂದ್ರ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಶ್ರೀ ರಾಮಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಮೌನೇಶ್ವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಜರುಗಿತು. ರಂಗಪ್ಪ ಒಂಟಗೋಡಿ, ಪ್ರವೀಣ ಬರಮನಿ ಚಾಲನೆ ನೀಡಿದರು. ಮೆರವಣಿಗೆ ಮುಂದೆ ಪುರವಂತರ ವೀರಗಾಸೆ ಗಮನ ಸೆಳೆಯಿತು. ಮಧ್ಯಾಹ್ನ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸ್ಥಳೀಯ ವಿಶ್ವಕರ್ಮ ಸಮಜ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಂಬಾರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಮಹಾಲಿಂಗಪುರ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹಣಮಂತ ಬಡಿಗೇರ, ಎ.ಎಂ. ಕಂಬಾರ ಇದ್ದರು. ಸಾವಿತ್ರಿ ಲೋಹಾರ, ಸಕ್ಕೂಬಾಯಿ ಸುತಾರ ಪ್ರಾರ್ಥನೆ ಮತ್ತು ಪ್ರೇಮಾ ಪೂಜಾರ, ಮಹಾನಂದಾ ಅಮಾತಿ, ಅಮೃತಾ ಕುಲಗೋಡ ಸ್ವಾಗತಗೀತೆ ಹಾಡಿದರು. ಬಸವರಾಜ ಲೋಹಾರ ಸ್ವಾಗತಿಸಿದರು. ರಾಘವೇಂದ್ರ ನೀಲನ್ನವರ ನಿರೂಪಿಸಿದರು. ಸದಾಶಿವ ಕಂಬಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.