ADVERTISEMENT

ರಸ್ತೆ ಅತಿಕ್ರಮಣ ತೆರವಿಗೆ ನಗರಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:00 IST
Last Updated 9 ಸೆಪ್ಟೆಂಬರ್ 2011, 10:00 IST

ಬಾಗಲಕೋಟೆ: ನಗರದ ವಲ್ಲಭಬಾಯಿ ಚೌಕ್‌ನ ಆಸುಪಾಸು ರಸ್ತೆಯನ್ನು ಒತ್ತು ವರಿ ಮಾಡಿಕೊಂಡಿರುವ ಅಂಗಡಿ- ಮುಂಗಟ್ಟು, ಗೂಡಂಗಡಿ, ರಸ್ತೆ ಮೇಲೆ ವ್ಯಾಪಾರ ಮಾಡುವವರನ್ನು ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ವಲ್ಲಭಬಾಯಿ ಚೌಕ್‌ನಲ್ಲಿ ಸಾರ್ವಜನಿಕರು, ವಾಹನ ಗಳು ಚಲಿಸದಂತಹ ಸ್ಥಿತಿ ನಿರ್ಮಾಣ ವಾಗಿದೆ, ರಸ್ತೆ ಬದಿ ವ್ಯಾಪಾರಿಗಳಿಂದ ಮತ್ತು ಕೆಲ ಅಂಗಡಿ-ಮುಂಗಟ್ಟುಗಳು ರಸ್ತೆವರೆಗೂ ಚಾಚಿಕೊಂಡಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ ಎಂದರು.

ಸಂಚಾರಕ್ಕೆ ತೊಂದರೆಯಾಗಿರುವ ಎಲ್ಲ ಅಂಗಡಿ- ಮುಂಗಟ್ಟು, ರಸ್ತೆ ವ್ಯಾಪಾರಿಗಳನ್ನು ದೀಪಾವಳಿ ಬಳಿಕ  ತೆರವುಗೊಳಿಸಿ, ಅವರಿಗೆ ಹಳೇ ಅಂಚೆ ಕಚೇರಿ ಬಳಿ ಇರುವ ಜಾಗದಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಕ್ಷೇಪ: ನಗರಸಭೆ ವತಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಬಿಲ್‌ಗಳಿಗೆ ಕಾನೂನು ಬಾಹಿರವಾಗಿ ಉಪಾಧ್ಯಕ್ಷರ ಸಹಿ ಪಡೆ ಯುತ್ತಿರುವ ಕ್ರಮಕ್ಕೆ ಸದಸ್ಯರಾದ  ರಾಜು ಬಳೂಲಮಠ, ಲಕ್ಷ್ಮಣ ಮಚಖಂಡಿ, ಸದಾನಂದ ನಾರಾ ಮತ್ತಿ ತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಉಪಾಧ್ಯಕ್ಷರ ಸಹಿ ಪಡೆಯುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಸದಸ್ಯರು ಇದರಿಂದಾಗಿ ಬಿಲ್‌ಗಳು ಬೇಗನೆ ಅನುಮೋದನೆ ಆಗದೆ  ಅಭಿ ವೃದ್ಧಿ ಕಾರ್ಯಗಳಿಗೆ ಅಡಚಣೆಯಾಗು ತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಸಿದ ಪೌರಾಯುಕ್ತ ಶಿಂಧೆ, ನಗರಸಭೆಯ ಯಾವುದೇ ಬಿಲ್‌ಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸಹಿ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ, ಈ ಸಂಬಂಧ ಜಿಲ್ಲಾಧಿಕಾರಿ ಅವ ರೊಂದಿಗೂ ಈಗಾಗಲೇ ಚರ್ಚಿಸ ಲಾಗಿದೆ. ಆದರೆ ಇಲ್ಲಿ ಮೊದಲಿ ನಿಂದಲೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸಹಿ ಪಡೆದು ಬಿಲ್ ಅಂಗೀಕರಿಸ ಲಾಗುತ್ತಿದೆ ಎಂದರು.

ಚರ್ಚೆಯ ಮಧ್ಯ ಪ್ರವೇಶಿಸಿದ ಶಾಸಕ ವೀರಣ್ಣ ಚರಂತಿಮಠ, ಈ ಬಗ್ಗೆ ಚರ್ಚಿಸಿ ತೀರ್ಮಾನಕೈಗೊಳ್ಳಲು ಸಲಹೆ ನೀಡಿ, ಮುಂದಿನ ದಿನಗಳಲ್ಲಿ ಯಾವುದೇ ಬಿಲ್‌ಗಳಿಗೆ ಉಪಾಧ್ಯಕ್ಷರ ಸಹಿ ಪಡೆಯುವ ಅಗತ್ಯವಿಲ್ಲ, ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದರು.

ಸ್ವಚ್ಛತೆ ಕಾಪಾಡಲು ಸೂಚನೆ: ನಗರದ ಗಟಾರಗಳು ತ್ಯಾಜ್ಯದಿಂದ ಮುಚ್ಚಿ ಹೋಗಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಇದರಿಂದ ಜನ ಜೀವನದ ಮೇಲೆ ಮತ್ತು ನಗರದ ಸ್ವಚ್ಚತೆ ಮೇಲೆ ಪರಿಣಾಮ ಉಂಟಾಗಿದೆ ಎಂದು ಸದಸ್ಯ ಲಕ್ಷ್ಮಣ ಮಚಖಂಡಿ, ಭಾಗ್ಯಶ್ರೀ ಹಂಡಿ ಮತ್ತಿತರ ಸದಸ್ಯರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ವೀರಣ್ಣ ಚರಂತಿಮಠ ಮಾತ ನಾಡಿ, ಹಬ್ಬ, ಉತ್ಸವಗಳು ನಗರದಲ್ಲಿ ನಡೆಯುತ್ತಿರುವುದರಿಂದ ಸ್ಚಚ್ಚತೆಗೆ ಆದ್ಯತೆ ನೀಡಬೇಕು, ಯಾವುದೇ ಸಾಂಕ್ರಾಮಿಕ ರೋಗ ಹರಡಲು ಆಸ್ಪದ ನೀಡಬಾರದು ಎಂದು ಸೂಚಿಸಿದರು.

ಹಗಲು ಹೊತ್ತಿನಲ್ಲಿ ಬೀದಿದೀಪಗಳು ಉರಿಯುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ಸದಸ್ಯರೊಬ್ಬರು ತಂದಾಗ, ಪ್ರತಿಕ್ರಿಯಿಸಿದ ಶಾಸಕರು, ಸಂಜೆ 7ಕ್ಕೆ ದೀಪಗಳನ್ನು ಹೊತ್ತಿಸಬೇಕು, ಬೆಳಿಗ್ಗೆ 6 ಗಂಟೆಗೆ ನಂದಿಸಬೇಕು ಎಂದು ಸಂಬಂಧ ಪಟ್ಟ ಸಿಬ್ಬಂದಿಗೆ ತಿಳಿಸಿದರು.

ಮೀನು ಮಾರುಕಟ್ಟೆ: ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ನೆರವಿನಡಿ ನವನಗರದ ಜೈಲ್ ಸಮೀಪ ಮೀನು ಮಾರುಕಟ್ಟೆ ನಿರ್ಮಿಸಲು ಜಾಗವನ್ನು ಒದಗಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಹಳೆ ನಗರದ ನೀರಿನ ಟ್ಯಾಂಕ್ ಬಳಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ರೂ.8.20 ಲಕ್ಷ ವೆಚ್ಚದಲ್ಲಿ ಮತ್ತು ರೈಲ್ವೆ ನಿಲ್ದಾಣದ ಹತ್ತಿರ ಇರುವ ನಾಕಾ ಕಟ್ಟಡ ಜಾಗದಲ್ಲಿ, ಶಿರೂರ ಅಗಸಿ ಹತ್ತಿರ ನಾಕಾ ಕಟ್ಟಡದಲ್ಲಿ ಮತ್ತು ಮಚಖಂಡಿ ತಿರುವಿನ ಹತ್ತಿರ ನಾಕಾ ಕಟ್ಟಡದ ಜಾಗದಲ್ಲಿ ನಗರಸಭೆ ವತಿಯಿಂದ ವಾಣಿಜ್ಯ ಕಟ್ಟಡ ನಿರ್ಮಿಸುವ ಕುರಿತು ಮಂಜೂರಾತಿ ನೀಡಲಾಯಿತು.

ರೂ. 17.89 ಲಕ್ಷ ಮೊತ್ತದಲ್ಲಿ ವಿದ್ಯಾಗಿರಿ ಕೆಂಚಮ್ಮನ ಗುಡಿ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಸುತ್ತಲೂ ಕಂಪೌಂಡ್, ಕೊಳವೆಬಾವಿ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲು ಒಪ್ಪಿಗೆ ನೀಡಲಾತು.

ರೂ. 5.14 ವೆಚ್ಚದಲ್ಲಿ ಹುಂಡೇಕಾರ ದಿಡ್ಡಿಯಲ್ಲಿ ಎರಡು ಶೌಚಾಲಯಗಳಿಗೆ ನೀರು ಪೂರೈಕೆ ಕಲ್ಪಿಸಲು ಕೊಳವೆಬಾವಿ ಕೊರೆಸಲು ಮತ್ತು ಹಳೆ ಶೌಚಾಲ ಯವನ್ನು ತೆರವುಗೊಳಿಸಿ ಧೋಬಿಘಾಟ್ ನಿರ್ಮಿಸಲು ತೀರ್ಮಾನಿಸಲಾಯಿತು.  ಶವಸಾಗಿಸುವ ನಗರಸಭೆಯ ವಾಹನಕ್ಕೆ ರೂ.400 ನಿಗದಿಪಡಿಸಲಾಯಿತು.

ನಗರದಲ್ಲಿ ಹೆಚ್ಚುತ್ತಿರುವ ಹಂದಿ, ಕತ್ತೆ ಗಳುನ್ನು ಬೇರಡೆಗೆ ಸಾಗಿಸಲು ಟೆಂಡರ್ ಕರೆಯಲು ಸೂಚಿಸಲಾಯಿತು ಮತ್ತು ಬಿಡಾಡಿ ದನಗಳನ್ನು  ಗೋಶಾಲೆಗೆ ಸಾಗಿಸುವಂತೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.