ADVERTISEMENT

ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿಲ್ಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 8:35 IST
Last Updated 26 ಫೆಬ್ರುವರಿ 2011, 8:35 IST

ಬಾಗಲಕೋಟೆ: ಬವಿವ ಸಂಘದ ಪಿ.ಎಂ.ನಾಡಗೌಡ ದಂತ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ವಾರ್ಷಿಕ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದ ರಿಹರ್ಸಲ್ ವೇಳೆ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಯಾವುದೇ ಘಟನೆ ನಡೆದಿಲ್ಲ ಎಂದು ತನಿಖಾ ಸಮಿತಿ ವರದಿ ನೀಡಿದೆ.

ರಾಷ್ಟ್ರಧ್ವಜಕ್ಕೆ ಅಗೌರವ ತೋರಲಾಗಿದೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ವರದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಎಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಬಳ್ಳಿ ನೇತೃತ್ವದ ಐವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.

ಶುಕ್ರವಾರ ಕಾಲೇಜಿನ ಸಭಾಭವನದಲ್ಲಿ ಸಭೆ ನಡೆಸಿದ ಸಮಿತಿಯು ಕಾರ್ಯಕ್ರಮದ ವಿಡಿಯೋ, ಛಾಯಾಚಿತ್ರಗಳು ಹಾಗೂ ಕಾರ್ಯಕ್ರಮಕ್ಕಾಗಿ ಬಳಸಲಾಗಿದ್ದ ಪರಿಕರಗಳನ್ನು ಪರಿಶೀಲಿಸಿತು.ಇದಲ್ಲದೇ ಷೋನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಅವರಿಗೆ ಸಹಕರಿಸಿದ ಮಿತ್ರರು, ಕಾಲೇಜ್ ಸಿಬ್ಬಂದಿ, ನಿರ್ಣಾಯಕರು ಹಾಗೂ ಪ್ರಾಚಾರ್ಯರಿಂದ ಮಹಿತಿಯನ್ನು ಸಮಿತಿ ಪಡೆದುಕೊಂಡಿತು.

ಇವೆಲ್ಲವುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಮಗ್ರ ವರದಿ ತಯಾರಿಸಿದ ಸಮಿತಿಯು, ರಾಷ್ಟ್ರಧ್ವಜಕ್ಕೆ ಅಗೌರವ ತೋರುವಂತಹ ಘಟನೆ ನಡೆದಿಲ್ಲ ಎಂದು ದೃಢಪಡಿಸಿತು.“ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹೋಲುವಂತಹ ಬಣ್ಣದ ದುಪಟ್ಟಾಗಳನ್ನು ಬಳಸಿತ್ತು. ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಕೈಯಲ್ಲಿ ಹಿಡಿದುಕೊಂಡು ಹೊರಟ ವಿದ್ಯಾರ್ಥಿಯು ಕೆಳಗೆ ಬಿದ್ದಿರುವ ದುಪಟ್ಟಾಗಳನ್ನು ಆಕಸ್ಮಿಕವಾಗಿ ತುಳಿದಿದ್ದಾನೆ ವಿನಃ ಧ್ವಜವನ್ನಲ್ಲ” ಎಂದು ಸಮಿತಿಯ ವರದಿ ತಿಳಿಸಿದೆ.

ಈ ಪ್ರಕರಣದಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ್ ವನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಇಂತಹ ಸಂಶಯಾಸ್ಪದ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.