ADVERTISEMENT

ರೈತರಿಗೆ ಒಂದು ಲಕ್ಷ ಸಸಿ ವಿತರಣೆ ಗುರಿ

ಅನಂತಪುರ ನರ್ಸರಿಯಲ್ಲಿ 2.5 ಲಕ್ಷ ಸಸಿ ಅಭಿವೃದ್ಧಿ; ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:25 IST
Last Updated 9 ಜೂನ್ 2018, 9:25 IST
ರಸ್ತೆಯಲ್ಲಿ ನೆಡುತೋಪು ಮತ್ತು ಅರಣ್ಯೀಕರಣಕ್ಕಾಗಿ ಬಾದಾಮಿ ಸಮೀಪದ ಅನಂತಪುರ ನರ್ಸರಿಯಲ್ಲಿ ಬೆಳೆಸಿದ ಬೇವು ಮತ್ತು ಅರಳಿ ಗಿಡಗಳು
ರಸ್ತೆಯಲ್ಲಿ ನೆಡುತೋಪು ಮತ್ತು ಅರಣ್ಯೀಕರಣಕ್ಕಾಗಿ ಬಾದಾಮಿ ಸಮೀಪದ ಅನಂತಪುರ ನರ್ಸರಿಯಲ್ಲಿ ಬೆಳೆಸಿದ ಬೇವು ಮತ್ತು ಅರಳಿ ಗಿಡಗಳು   

ಬಾದಾಮಿ: ‘ತಾಲ್ಲೂಕಿನಲ್ಲಿ ಅರಣ್ಯೀಕರಣ, ರಸ್ತೆ ಪಕ್ಕದಲ್ಲಿ ನೆಡುತೋಪು ಮತ್ತು ರೈತರಿಗೆ ವಿತರಿಸಲು ಅನಂತಪುರ ನರ್ಸರಿಯಲ್ಲಿ 2.5 ಲಕ್ಷ ಸಸಿ ಬೆಳೆಸಲಾಗಿದೆ’ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಅನಂತ ಪಾಕಿ ಹೇಳಿದರು. ಅರಣ್ಯೀಕರಣ ಮತ್ತು ರಸ್ತೆ ಪಕ್ಕದಲ್ಲಿ 1.5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಇದೆ. ರೈತರಿಗೆ 1 ಲಕ್ಷ ಸಸಿ ವಿತರಿಸಲಾಗುವುದು ಎಂದು ತಿಳಿಸಿದರು.

ರಸ್ತೆ ಪಕ್ಕದಲ್ಲಿ 10ರಿಂದ 12 ಅಡಿ ಎತ್ತರ ಬೆಳೆಸಿದ ಬೇವು, ಬಸರಿ, ಅರಳಿ ಮತ್ತು ಹೊಂಗೆ, ತಪಸಿ ಗಿಡಗಳನ್ನು ನಾಟಿ ಮಾಡಲಾಗುವುದು. ರೈತರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಒಂದು ಲಕ್ಷ ಸಸಿ ಸಾಗವಾನಿ, ಪೇರು ಸಾಗವಾನಿ, ಅಶೋಕ, ಬಾದಾಮಿ, ಲಿಂಬೆ ಸಸಿ ಅನಂತಪುರ ನರ್ಸರಿಯಲ್ಲಿಯೇ ಕೊಡಲಾಗುವುದು’ ಎಂದರು.

ಗಿಡವನ್ನು ಬೆಳೆಸಲು ರೈತರಿಗೆ  ಮೂರು ವರ್ಷದಲ್ಲಿ ₹ 100 ಕೊಡಲಾಗುವುದು. ರೈತರು ಆಧಾರ್‌ ಕಾರ್ಡ್, ಬ್ಯಾಂಕ್‌ ಪಾಸ್‌ ಬುಕ್‌ ಝರಾಕ್ಸ್ ಮತ್ತು ಹೊಲದ ಉತಾರ ಕೊಡಬೇಕು. ಹೆಚ್ಚಿನ ಮಾಹಿತಿಗೆ ಉಪ ಅರಣ್ಯ ಅಧಿಕಾರಿ ಸಿ.ಜಿ.ಮುಜಗೊಂಡ 9986094260 ಅಥವಾ ಅರಣ್ಯ ರಕ್ಷಕ ಎಸ್‌.ಎಸ್‌.ಲೋಣಿಮಠ 9902381703 ಅವರನ್ನು ಸಂಪರ್ಕಿಸಬಹುದು.

ADVERTISEMENT

ಪರಿಸರ ಪ್ರಜ್ಞೆ ಅಗತ್ಯ: ಅಕ್ಕಿ

ಇಳಕಲ್: 'ವಿದ್ಯಾರ್ಥಿ ದೆಸೆಯಲ್ಲಿ ಪರಿಸರ ಮಹತ್ವ, ಅಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ತಿಳಿಸಿ, ಪರಿಸರ ಪ್ರಜ್ಞೆ ಜಾಗೃತಿಗೊಳಿಸುವ ಅಗತ್ಯ ಇದೆ' ಎಂದು ಎಸ್‍ವಿಎಂ ಮಹಿಳಾ ಪದವಿ ಕಾಲೇಜಿನ ಚೇರಮನ್ ಶರಣಪ್ಪ ಅಕ್ಕಿ ಹೇಳಿದರು.
ಇಲ್ಲಿಯ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಎನ್‍ಎಸ್‍ಎಸ್‍ ಘಟಕದಡಿ ನಡೆದ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಸುತ್ತಲಿನ ವಸ್ತುಗಳು ಕೇವಲ ನಮ್ಮ ಬಳಕೆಗೆ ಇವೆ ಎಂಬ ಮನೋಭಾವ ಬೆಳೆದಿದೆ. ಅತಿಯಾಗಿ ಬಳಸುವುದು ಹಾಗೂ ಬಿಸಾಡುವುದರ ಪರಿಣಾಮ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಅಕಾಲಿಕ ಮಳೆ, ಭೂ ತಾಪ ಹೆಚ್ಚಳದಂತಹ ಹವಾಮಾನ ವೈಪರೀತ್ಯ ಹೆಚ್ಚಾಗಿವೆ. ಶುದ್ಧ ಆಮ್ಲಜನಕ, ಕುಡಿಯುವ ನೀರಿನ ಕೊರತೆ ತೀವ್ರವಾಗುತ್ತಿದೆ.  ಜೀವಸಂಕುಲ ಸಂಕಷ್ಟ ಸಿಲುಕುತ್ತದೆ. ಕಾರಣ ಪರಿಸರ ಸ್ನೇಹಿ ಜೀವನ ನಡೆಸಬೇಕು. ನಮ್ಮ ಪೂರ್ವಜರ ಸರಳ ಜೀವನ ನಮ್ಮ ಆದರ್ಶವಾಗಬೇಕು’ ಎಂದರು.

‘ಪ್ರತಿಯೊಬ್ಬರು ಮನೆ ಅಂಗಳದಲ್ಲಿ ಸಸಿ ನೆಡುವುದಲ್ಲದೇ ಮಕ್ಕಳಂತೆ ಜೋಪಾನ ಮಾಡಬೇಕು. ಅಂತರ ರಾಷ್ಟ್ರೀಯ ಪರಿಸರ ದಿನ ಪ್ಲಾಸ್ಟಿಕ್‍ ಬಳಸಲ್ಲ’ ಎಂದರು. ಪ್ರಾಚಾರ್ಯ ಬಸವರಾಜ ಸುಗ್ಗಮದ, ಎನ್‍ಎಸ್‍ಎಸ್‍ ಅಧಿಕಾರಿ ಟಿ.ಎಂ.ಕುಲಕರ್ಣಿ, ಕಾಲೇಜಿನ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.