ADVERTISEMENT

ಲಾಠಿ ಚಾರ್ಜ್: ನ್ಯಾಯಾಂಗ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:03 IST
Last Updated 18 ಡಿಸೆಂಬರ್ 2012, 11:03 IST
ಬೆಳಗಾವಿಯಲ್ಲಿ ಇತ್ತೀಚೆಗೆ ದಲಿತರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಸ್ಪೃಶ್ಯರ ಮೀಸಲಾತಿ ಹೋರಾಟ ಸಮಿತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿಯಲ್ಲಿ ಇತ್ತೀಚೆಗೆ ದಲಿತರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಸ್ಪೃಶ್ಯರ ಮೀಸಲಾತಿ ಹೋರಾಟ ಸಮಿತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.   

ಬಾಗಲಕೋಟೆ: ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ಸೇರಿ ಸಮಗ್ರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಮೂಲ ಅಸ್ಪೃಶ್ಯರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಪ್ರತಿಭಟನೆ ನಡೆಸಿ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸಂದೀಪ ಪಾಟೀಲರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಹೋರಾಟಗಾರರ ಮೇಲೆ ಇಲಾಖೆ ಯಿಂದ ಹೂಡಲಾದ ಮೊಕದ್ದಮೆ ಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಆರು ತಿಂಗಳು ಗತಿಸಿದರೂ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸ ದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ವರದಿ ಅಂಗೀಕಾರಕ್ಕೆ ಆಗ್ರಹಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ನಿರ್ಣಯ ಕೈಗೊಂಡು ಹೋರಾಟ ಮುಂದುವರಿಸಿದಾಗ ಪೊಲೀಸ್ ಬಲ ಪ್ರಯೋಗ ಮಾಡಿ ಹೋರಾಟವನ್ನು ಹತ್ತಿಕ್ಕಿದ್ದು, ಅಕ್ಷಮ್ಯ ಅಪರಾಧವೆಂದು ಪ್ರತಿಭಟನಾ ಕಾರರು ದೂರಿದರು.ಕೂಡಲೇ ರಾಜ್ಯ ಸರ್ಕಾರ ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಅಸ್ಪೃಶ್ಯ ಮೀಸಲಾತಿ ಹೋರಾಟ ಸಮಿತಿಯ ಪ್ರಮುಖರಾದ ಪ್ರೇಮ ನಾಥ ಗರಸಂಗಿ, ಮಲ್ಲಿಕಾರ್ಜುನ ಚಲವಾದಿ, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ರೇಣುಕಾ ಗರ್ಲ, ಮನೋಹರ ಕದಂ, ತಿಪ್ಪಣ್ಣ ನೀಲನಾಯಕ, ಗಣಪತಿ ಮೇತ್ರಿ, ರಾಜು ಮನ್ನಿಕೇರಿ, ಶಿವಾನಂದ ಮಾದರ, ಪಿ.ಎಸ್. ಕವಡಿಮಟ್ಟಿ, ಯಲ್ಲಪ್ಪ ಸನಕ್ಯಾನವರ, ಹುಸೇನ ಅವರಾದಿ, ಪರಶುರಾಮ ನಾರಾಯಣಿ, ಸದಾಶಿವ ಕೊಡಬಾಗಿ, ರಾಮಪ್ರಸಾದ್ ಬೆಂಡಿಗೇರಿ, ಮುತ್ತಪ್ಪ ಗಾಜಿ, ಲಕ್ಕಪ್ಪ ರಾಣವ್ವಗೋಳ, ಶಿವಾನಂದ ಬಿಸನಾಳ, ಯಲ್ಲಪ್ಪ ಕಮತಗಿ, ಸದಾಶಿವ ಮೇತ್ರಿ, ಉಮಾಪತಿ ನೀಲನಾಯಕ, ಕೃಷ್ಣ ಸಣ್ಣಪ್ಪಗೋಳ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.