ADVERTISEMENT

ಸಂಘಟನೆಯಿಂದ ಕಾಂಗ್ರೆಸ್‌ಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:40 IST
Last Updated 15 ಅಕ್ಟೋಬರ್ 2012, 7:40 IST

ಮಹಾಲಿಂಗಪುರ: ರಾಜ್ಯದಲ್ಲೆಗ ಸ್ಥಿರ ಸರ್ಕಾರವಿಲ್ಲ. ರಾಜ್ಯದ ಪ್ರಸ್ತುತ ಪ್ರಗತಿ 60 ವರ್ಷಗಳಷ್ಟು ಹಿಂದಕ್ಕೆ ಸರಿದಿದೆ. ರಾಜ್ಯದ ಹಿತ ಕಾಪಾಡಿ, ಜನರಿಗೆ ಉತ್ತಮ ಭವಿಷ್ಯ ರೂಪಿಸಲು ಕಾಂಗ್ರೆಸ್ ಒಂದೇ ಪರ್ಯಾಯ ಶಕ್ತಿ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಹೇಳಿದರು.

ರಾಜ್ಯದ ಜನರನ್ನು ವಂಚಿಸಿ, ಸಂಪನ್ಮೂಲವನ್ನು ಹಗಲು ದರೋಡೆ ಮಾಡಿದ ಬಿಜೆಪಿ ಸರ್ಕಾರವನ್ನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಿತ್ತೊಗೆದು ರಾಜ್ಯವನ್ನು ರಕ್ಷಿಸಬೇಕಾಗಿದೆ. ಇದು ನಾಡಿನ ಜನರಲ್ಲಿದೆ. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇಲ್ಲಿಗೆ ಸಮೀಪದ ಚಿಮ್ಮಡ ಗ್ರಾಮದಲ್ಲಿ ಭಾನುವಾರ ನಡೆದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರದ ಸಾಧನೆಗಳೆಂದು ಹೇಳಿಕೊಳ್ಳುತ್ತ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ.

ಬಿಜೆಪಿ ಸರ್ಕಾರ ವಾಸ್ತವ ಮುಚ್ಚಿಟ್ಟು, ಅಭಿವೃದ್ಧಿಗೆ ಆದ್ಯತೆ ನೀಡದೆ ವೈಯಕ್ತಿಕ ಹಿತಾಸಕ್ತಿಗೆ ಮುಂದಾಗಿದೆ. ರಾಜ್ಯದಲ್ಲಿ ತತ್ವಾದರ್ಶಗಳಿಂದ, ಜನತೆಯ ಹಿತವನ್ನು ಕಾಪಾಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಜನರು ಮನವರಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT