ಬಾಗಲಕೋಟೆ: ತಾಲ್ಲೂಕಿನ ಮುರನಾಳ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಕುಂಭಮೇಳ ಮತ್ತು ಗಂಗಾಪೂಜೆ ವಿಜೃಂಭಣೆಯಿಂದ ನಡೆಯಿತು.
ಕುಂಭ ಹೊತ್ತ 500ಕ್ಕೂ ಹೆಚ್ಚು ಸುಮಂಗಲೆಯರು ಹಾಗೂ ಮಳೆರಾಜೇಂದ್ರಸ್ವಾಮಿ ಮೂರ್ತಿಯ ಪಲ್ಲಕ್ಕಿಯೊಂದಿಗೆ ಹೊಂಡಕ್ಕೆ ತೆರಳಿ, ಪಂಚ ಬಿಂದಗಿಯನ್ನು ಹೊತ್ತ ಸುಮಂಗಲೆಯರಿಗೆ ಉಡಿತುಂಬಿ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಮಳೆರಾಜೇಂದ್ರಸ್ವಾಮಿ ಮಠದ ಮೌನಪ್ಪಯ್ಯ ಸ್ವಾಮಿಯವರಿಂದ ಗಂಗೆಗೆ ಬಾಗಿನ ಅರ್ಪಿಸಲಾಯಿತು.
ನಂತರ ಗ್ರಾಮದಲ್ಲಿ ಮೆರವಣಿಗೆ ಮೂಲಕ ತೆರಳಿ ವಿವಿಧ ದೇವಸ್ಥಾನಗಳಲ್ಲಿ ನೀರಿನ ಅಭಿಷೇಕ, ಪೂಜೆ ಸಲ್ಲಿಸಿ, ಮಳೆರಾಜೇಂದ್ರಸ್ವಾಮಿ ಮಠಕ್ಕೆ ತೆರಳಿ ಮಳೆರಾಜೇಂದ್ರಸ್ವಾಮಿಗೆ ಮಹಾಮಂಗಳಾರತಿ ನೇರವೇರಿಸಿದರು. ಬಳಿಕ ಸಾರ್ವಜನಿಕರಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮದ ವಾತಾವರಣವಿತ್ತು. ಎಲ್ಲರೂ ಹೊಸ ಬಟ್ಟೆ ತೊಟ್ಟು, ಮಡಿಯಿಂದ ಪೂಜೆ, ಅಭಿಷೇಕ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರಷ್ಟೇ ಅಲ್ಲ ಪುರುಷರೂ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಹುಚ್ಚಪ್ಪ ಶಿರೂರ, ಈರಪ್ಪ ದೊಡ್ಡಮನಿ, ಮಳೆಯಪ್ಪ ಮಾಸ್ತಾರ ತೆಗ್ಗಿ, ಶಂಕ್ರಪ್ಪ ಬಡಿಗೇರ, ರಾಮಪ್ಪ ಗಣಿ, ಶೇಖಪ್ಪ ಓಬಳ್ಳಿ, ದುಶಂಗಪ್ಪ ವಡ್ಡರ, ಸುಭಾಷ ಸೂಳಿಕೇರಿ, ಈರಪ್ಪ ಶಿರೂರ, ಸಿದ್ದಪ್ಪ ಅಂಗಡಿ, ರುದ್ರನಗೌಡ ಪಾಟೀಲ, ಭೀಮರಾವ ಸೂಳಿಕೇರಿ, ಸೋಮಪ್ಪ ಬೂದಿಹಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.