ADVERTISEMENT

ಸಹಕಾರಿಗಳಲ್ಲಿ ಸಂಘಟಿತ ಪ್ರಯತ್ನ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:15 IST
Last Updated 1 ಅಕ್ಟೋಬರ್ 2012, 6:15 IST

ಹುನಗುಂದ: ಗ್ರಾಮೀಣ ಭಾಗದ ಜನತೆಯ ಆರ್ಥಿಕ ಉನ್ನತಿಗೆ ಸಹಕಾರಿ ಬ್ಯಾಂಕುಗಳ ನೆರವು ದೊಡ್ಡದು. ಎಲ್ಲ ವರ್ಗದ ಜನರಿಗೆ ಸಾಲ ದೊರೆತರೆ ಮಾತ್ರ ಉಪಯೋಗವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಅವರು ಭಾನುವಾರ ಇಲ್ಲಿನ ಸರ್ಕಾರಿ ಡಿ. ಇಡಿ ಕಾಲೇಜು ಮೈದಾನದಲ್ಲಿ ನಡೆದ  ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತಂದ `ಹೊನ್ನ ಮಹಾಂತ~ ಸ್ಮರಣ~ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಜನಸಮಾನ್ಯರಿಗೆ ನೆರವಾಗಿದ್ದಾರೆ. ರೈತರು, ನೇಕಾರರು ಮತ್ತು ದುಡಿಯುವ ವರ್ಗದ ಆರ್ಥಿಕ ಉನ್ನತಿಗೆ ಸಹಕಾರ ಸಂಘಗಳು ಮುಂದಾದಲ್ಲಿ ಆ ಕ್ಷೇತ್ರ ಬಲಗೊಳ್ಳುವುದು ಎಂದರು.

ನವೀಕರಣಗೊಂಡ ಬ್ಯಾಂಕ್ ಕಟ್ಟಡವನ್ನು ಉದ್ಘಾಟಿಸಿದ ಮೇಲ್ಮನೆ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಸಹಕಾರಿಗಳು ಸಂಘಟಿತರಾಗಿ ಸಾಗಿದಲ್ಲಿ ನಿರೀಕ್ಷಿತ ಗುರಿ ತಲುಪಬಹುದು ಎಂದರು.

ಕೋರ್ ಬ್ಯಾಂಕಿಂಗ್‌ಗೆ ಚಾಲನೆ ಗೊಳಿಸಿ ಮಾತನಾಡಿದ ಮೇಲ್ಮನೆ ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ, ದೇಶದಲ್ಲಿ ಮತ್ತೆ ಬಂಡವಾಳಶಾಹಿ ಮನೋಭಾವ ಹೆಚ್ಚುತ್ತಿದೆ. ಬಂಡವಾಳಶಾಹಿಗಳ ಮುಷ್ಠಿಯಿಂದ ಹಣ ಹೊರ ತರಬೇಕು ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, `ಕಂಠಿ ಮತ್ತು ನಾಡಗೌಡಅವರ ಆಡಳಿತ ಮಾದರಿ ಹಾದಿಯಲ್ಲಿ ನಡೆಯುವೆ. ತಾಲ್ಲೂಕಿನ ನೀರಾವರಿಯೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಈ ಹಾದಿಯಲ್ಲಿ ಎಲ್ಲರ ಸಹಕಾರ ಅಗತ್ಯ~ ಎಂದರು.

ಬ್ಯಾಂಕಿನ ಅಧ್ಯಕ್ಷ ಶಶಿಕಾಂತ ಗೌಡ ಪಾಟೀಲ ಮಾತನಾಡಿದರು. ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ.  ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಶ್ರೀಗಳು ಮಾತನಾಡಿದರು.

ಇಲಕಲ್ ಡಾ.ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಮೀನಗಡ ಶಂಕರರಾಜೇಂದ್ರ ಶ್ರೀಗಳು, ಸಂಸದ ಪಿ.ಸಿ. ಗದ್ದಿಗೌಡರ, ಬಾದಾಮಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮಾಜಿ ಸಚಿವರಾದ ಎಸ್.ಬಿ.ನಾಗರಾಳ ಮತ್ತು ಎಚ್.ವೈ. ಮೇಟಿ, ಕೇಂದ್ರ ಕಾರ್ಮಿಕ ಸಲಹಾ ಮಂಡಳಿ ಅಧ್ಯಕ್ಷ ವೆಂಕಟೇಶ ಸಾಕಾ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎಲ್.ಎಂ. ಪಾಟೀಲ, ಬ್ಯಾಂಕ್ ಉಪಾಧ್ಯಕ್ಷ ರವಿ ಹುಚನೂರ ಮತ್ತು ಉಪನಿಬಂಧಕ ಎಚ್.ವೈ. ಗದ್ದನಕೇರಿ ಉಪಸ್ಥಿತರಿದ್ದರು.

ಬ್ಯಾಂಕಿನ 18 ಜನ ಮಾಜಿ ನಿರ್ದೇಶಕರು, ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಎ.ಆರ್. ನಿಂಬಲಗುಂದಿ ಮತ್ತು ಎಸ್.ಎಸ್. ಮಲಗಿಹಾಳ ಅವರನ್ನು ಸತ್ಕರಿಸಲಾಯಿತು. ನಿರ್ದೇಶಕ ಬಿ.ವಿ. ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.